ಮಂಡ್ಯ: ನನಗೂ ಪ್ರಾಣ ಬೆದರಿಕೆ ಇತ್ತು ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಬಹಿರಂಗಪಡಿಸಿದ್ದಾರೆ.
ಮಂಡ್ಯದಲ್ಲಿ ಇಂದು ನಡೆದ ದಿಶಾ ಸಭೆಯಲ್ಲಿ ಸುಮಲತಾ ಅವರು ಈ ವಿಚಾರವನ್ನು ತಿಳಿಸಿದ್ದಾರೆ. ತಮ್ಮ 5 ವರ್ಷದ ಕೆಲಸದ ಬಗ್ಗೆ ಮೆಲುಕು ಹಾಕಿಕೊಂಡ ಅವರು ಪ್ರಾಣ ಬೆದರಿಕೆ ಇದ್ದ ಬಗ್ಗೆ ಹೇಳಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ: ಸುಮಲತಾ ಅಂಬರೀಶ್
ಸುಮಲತಾ ಹೇಳಿದ್ದೇನು..?: ನಾನು ಬೇಬಿ ಬೆಟ್ಟದ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದೆ. ಈ ವೇಳೆ ಹೋರಾಟ ನಿಲ್ಲಿಸುವಂತೆ ನನಗೆ ಒತ್ತಡ ಹಾಗೂ ಪ್ರಾಣ ಬೆದರಿಕೆ ಇತ್ತು. ಆದರೆ ಈ ಬೆದರಿಕೆಗೆ ಹೆದರದೆ ಕೆಆರ್ಎಸ್ ಅಣೆಕಟ್ಟೆಯ ಉಳಿವಿಗಾಗಿ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದೆ. ಹೋರಾಟದ ಫಲವಾಗಿ ಹೈಕೋರ್ಟ್ ಗಣಿಗಾರಿಕೆಯನ್ನು ನಿಲ್ಲಿಸಿದೆ ಎಂದು ಹೇಳಿದರು.
ಸುಮಲತಾ ಅಧ್ಯಕ್ಷತೆಯ ಕೊನೆಯ ದಿಶಾ ಸಭೆಯಾಗಿದ್ದರಿಂದ ಜಿಲ್ಲಾಡಳಿತದಿಂದ ಸಂಸದೆಯನ್ನು ಸನ್ಮಾನಿಸಿ ಗೌರವಿಸಲಾಯಿತು. ಮಂಡ್ಯ ಡಿಸಿ ಡಾ.ಕುಮಾರ್, ಸಿಇಓ ತನ್ವೀರ್ ಆಸೀಫ್, ಎಸ್ ಪಿ ಎನ್.ಯತೀಶ್ ರಿಂದ ಸುಮಲತಾ ಅವರಿಗೆ ಸನ್ಮಾನ ನಡೆಯಿತು. ಶಾಲು ಹೊದಿಸಿ, ಹಾರ ಹಾಕಿ ಗಣಪತಿ ವಿಗ್ರಹ ಗಿಫ್ಟ್ ನೀಡಿ ಬೀಳ್ಕೊಡಲಾಯಿತು.