ರಾಯಚೂರು: ಹೆರಿಗೆಯಾದ ಇಪ್ಪತ್ತೇ ದಿನಕ್ಕೆ ಪತ್ನಿಯನ್ನು ಹತ್ಯೆಗೈದು ಆತ್ಮಹತ್ಯೆ ಎಂಬಂತೆ ಬಿಂಬಿಸಿದ್ದ ಪತಿಯನ್ನು ರಾಯಚೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಅವಿನಾಶ್ ಎಂದು ಗುರುತಿಸಲಾಗಿದೆ. ಆರೋಪಿ ತನ್ನ ಪತ್ನಿ ಸೋನಿ (23) ಎಂಬಾಕೆಯನ್ನು ಇತ್ತೀಚೆಗೆ ನಗರದ ಲಾಡ್ಜ್ ಒಂದರಲ್ಲಿ ಹತ್ಯೆಗೈದಿದ್ದ. ಬಳಿಕ ಮಹಿಳೆಗೆ ಸಿಸೇರಿಯನ್ ಆಗಿ ಮಗು ತೆಗೆದ ಕಾರಣ ನೋವನ್ನು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕತೆ ಕಟ್ಟಿದ್ದ. ಇದನ್ನೂ ಓದಿ: ನಾಗ್ಪುರ ಕಾರ್ಖಾನೆಯಲ್ಲಿ ಭೀಕರ ಸ್ಫೋಟಕ್ಕೆ 9 ಮಂದಿ ಸಾವು – ಹಲವರಿಗೆ ಗಾಯ
ಪ್ರೀತಿಸಿ ಮದುವೆಯಾಗಿದ್ದ ದಂಪತಿಗೆ 20 ದಿನಗಳ ಮಗುವಿದ್ದು, ಇಬ್ಬರೂ ಅದೇ ಲಾಡ್ಜ್ನಲ್ಲೇ ಕೆಲಸ ಮಾಡುತ್ತಿದ್ದರು. ಹಣಕಾಸಿನ ಸಮಸ್ಯೆಯಿಂದ ನೊಂದಿದ್ದ ಅವಿನಾಶ್ ಪತ್ನಿ ಜೊತೆ ಆಗಾಗ ಜಗಳವಾಡುತ್ತಿದ್ದ ಎಂದು ತಿಳಿದು ಬಂದಿದೆ. ಇದೇ ವಿಚಾರಕ್ಕೆ ಗಲಾಟೆ ನಡೆದು ಪತ್ನಿಯನ್ನು ಹತ್ಯೆಗೈದಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಅಲ್ಲದೇ ಮಹಿಳೆಯನ್ನು ಹತ್ಯೆಗೈದ ಬಳಿಕ ರಾತ್ರಿ ಪೂರ್ತಿ ಶವದೊಂದಿಗೆ ಇದ್ದ ಆರೋಪಿ ಬೆಳಗ್ಗೆ ಆತ್ಮಹತ್ಯೆಯ ಕತೆ ಕಟ್ಟಿದ್ದ.
ಮಹಿಳೆಯ ಸಾವಿನ ಬಳಿಕ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಈಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ನಾಡಪ್ರಭು ಕೆಂಪೇಗೌಡರಿಗೆ ಅವಮಾನ: ನಟ ಚೇತನ್ ವಿರುದ್ಧ ದೂರು