ಬೆಂಗಳೂರು: ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ನಾಗೇಶ್ ಕೊನೆಗೂ ಈಗ ಪತ್ತೆಯಾಗಿದ್ದಾನೆ. ಈತನನ್ನು ಪತ್ತೆ ಮಾಡಲು ಪೊಲೀಸರು ನಾನಾ ಪ್ರಯತ್ನ ಮಾಡಿದ್ದರು. ಈ ಪ್ರಯತ್ನಕ್ಕೆ ಫಲ ಎಂಬಂತೆ ತಮಿಳುನಾಡಿನಲ್ಲಿ ನಾಗೇಶ್ ಪತ್ತೆಯಾಗಿದ್ದಾನೆ. ನಾಗೇಶ್ ಪತ್ತೆಯಾಗಿದ್ದು ವಿದ್ಯಾರ್ಥಿಯಿಂದ ಎನ್ನುವುದು ವಿಶೇಷ.
ಆ್ಯಸಿಡ್ ಎಸೆದ ಬಳಿಕ ಆತನನ್ನು ಹುಡುಕುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಸಾಕಷ್ಟು ಕಡೆ ಹುಡುಕಾಡಿದರೂ ಒಂದು ಸುಳಿವು ಬಿಟ್ಟುಕೊಡದೇ ಆತ ಪರಾರಿಯಾಗಿದ್ದ. ಪರಾರಿಯಾಗಿದ್ದರೂ ವಿದ್ಯಾರ್ಥಿ ನೀಡಿದ ಖಚಿತ ಸುಳಿವಿನಿಂದ ನಾಗೇಶ್ ಈಗ ಅರೆಸ್ಟ್ ಆಗಿದ್ದಾನೆ. ಇದನ್ನೂ ಓದಿ: ಈಗಲೂ ಬೇಕಾದ್ರೆ ಅವಳನ್ನೇ ಮದುವೆ ಆಗ್ತೀನಿ: ಆ್ಯಸಿಡ್ ನಾಗನ ದುರಹಂಕಾರದ ಮಾತು
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಎಎಸ್ಐ ಶಿವಣ್ಣ ಹಾಗೂ ಪಿಸಿ ರವಿಕುಮಾರ್ ತಮಿಳುನಾಡಿನ ತಿರುವಣ್ಣಾಮಲೈ ಸರ್ಕಾರಿ ಬಸ್ ನಿಲ್ದಾಣ ಸೇರಿದಂತೆ ಎಲ್ಲಕಡೆ ನಾಗೇಶ್ ಸುಳಿವಿಗಾಗಿ ಫೋಟೋವನ್ನು ಅಂಟಿಸಿದ್ದರು. ಈ ಫೋಟೋ ನೋಡಿದ ಒಬ್ಬ ವಿದ್ಯಾರ್ಥಿ ಇವನನ್ನು ನಾನು ಹತ್ತಿರದ ಆಶ್ರಮದಲ್ಲಿ ಧ್ಯಾನ ಮಾಡುವುದನ್ನು ನೋಡಿದ್ದೇನೆ ಎಂದು ಪೊಲೀಸರಿಗೆ ವಾಟ್ಸಪ್ ಮೂಲಕ ಮಾಹಿತಿ ನೀಡಿದ್ದಾನೆ.
ಇದಾದ ಬಳಿಕ ವಿದ್ಯಾರ್ಥಿ ರಮಣಶ್ರೀ ಆಶ್ರಮದಲ್ಲಿರುವ ನಾಗೇಶ್ ಫೋಟೋವನ್ನು ಅವನಿಗೆ ಗೊತ್ತಾಗದಂತೆ ಕ್ಲಿಕ್ಕಿಸಿ ಕಳಿಸಿದ್ದ. ಫೋಟೋ ನೋಡಿದ ತಕ್ಷಣ ಈತನೇ ಆರೋಪಿ ಎಂದು ಪೊಲೀಸರಿಗೆ ತಿಳಿದಿದ್ದು, ಕೂಡಲೇ ನಾಗೇಶ್ ಇರುವ ರಮಣಶ್ರೀ ಆಶ್ರಮಕ್ಕೆ ಎಎಸ್ಐ ಶಿವಣ್ಣ ಹಾಗೂ ಪಿಸಿ ರವಿಕುಮಾರ್ ಬಂದಿದ್ದಾರೆ.
ಈ ವೇಳೆ ಪೊಲೀಸರು ನಾಗೇಶ್ ಪಕ್ಕ ಶಾಂತವಾಗಿ ಭಕ್ತರ ರೀತಿ ಕುಳಿತುಕೊಂಡು ಅವನ ಜೊತೆ ಮಾತನಾಡಿದ್ದಾರೆ. ಸ್ವಲ್ಪ ಸಮಯ ಬಿಟ್ಟು ಪೊಲೀಸರು ತಮಿಳಿನಲ್ಲಿ ನಿಮ್ಮ ಹೆಸರು ಏನು ಎಂದು ಕೇಳಿದ್ದಾರೆ. ಅದಕ್ಕೆ ಅವನು ಯಾವುದೇ ಪ್ರತಿಕ್ರಿಯೆಯನ್ನು ಕೊಟ್ಟಿಲ್ಲ. ಅದಕ್ಕೆ ಪೊಲೀಸರೇ ನಾಗೇಶ್ ಎಂದು ಎಂದು ಕರೆದಿದ್ದು, ಅವನು ತಿರುಗಿ ನೋಡಿದ್ದಾನೆ. ಆಗ ನಾಗೇಶ್ ಪೊಲೀಸರನ್ನು ಯಾರು ನೀವು ಎಂದು ಕೇಳಿದ್ದು, ಆತ ‘ನಾನೇ ನಾಗೇಶ್’ ಎಂದು ಒಪ್ಪಿಕೊಂಡಿದ್ದ. ಇದನ್ನೂ ಓದಿ: ಪ್ರಾಣ ಪಣಕ್ಕಿಟ್ಟು 8ನೇ ಮಹಡಿಯಲ್ಲಿ ನೇತಾಡುತ್ತಿದ್ದ ಮಗು ರಕ್ಷಿಸಿದ – ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆ
ಈತ ನಾಗೇಶ್ ಎನ್ನುವುದು ಖಚಿತವಾಗುತ್ತಿದ್ದಂತೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.