– ಮಗಳ ಪರೀಕ್ಷೆಗೆ ಹಾಜರಾಗಲಿಲ್ಲ ಎಂದು ಕಣ್ಣೀರಿಟ್ಟ ತಾಯಿ
ನವದೆಹಲಿ: ಕಳೆದ ವರ್ಷ ಉತ್ತರಾಖಂಡದಲ್ಲಿ (Uttarakhand ) ನಿರ್ಮಾಣ ಹಂತದ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದ ರ್ಯಾಟ್-ಹೋಲ್ ಗಣಿಗಾರಿಕೆ ತಜ್ಞ ವಕೀಲ್ ಹಸನ್ ಅವರ ಮನೆಯನ್ನು ಅಕ್ರಮ ಎಂದು ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ಇದರಿಂದ ತಮ್ಮ ಮಗಳು ಗುರುವಾರ ಬರೆಯಬೇಕಾಗಿದ್ದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಅವರ ಕುಟುಂಬ ಹೇಳಿಕೊಂಡಿದೆ.
ಹಸನ್ ಅವರ ಪುತ್ರಿಯ ಪುಸ್ತಕಗಳು ಮತ್ತು ಶಾಲಾ ಸಮವಸ್ತ್ರ ಸೇರಿದಂತೆ ಮನೆಯ ವಸ್ತುಗಳು ಮನೆಯ ಅವಶೇಷಗಳ ಅಡಿ ಸಿಲುಕಿವೆ. ಇದರಿಂದ 10ನೇ ತರಗತಿ ವಿದ್ಯಾರ್ಥಿನಿಯಾದ ಅಲಿಜಾ ವಿಜ್ಞಾನ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಅವರ ಕುಟುಂಬದ ಸದಸ್ಯರು ಹೇಳಿಕೊಂಡಿದ್ದಾರೆ.
ಪರೀಕ್ಷೆಯ ದಿನದಂದು ನನ್ನ ಮಗಳು ರಸ್ತೆಯಲ್ಲಿ ನಿಂತಿದ್ದಾಳೆ. ಆಕೆಯ ಪುಸ್ತಕಗಳು, ಶಾಲಾ ಉಡುಗೆ ಎಲ್ಲವೂ ಅವಶೇಷಗಳ ಅಡಿಯಲ್ಲಿ ಎಲ್ಲೋ ಚದುರಿಹೋಗಿವೆ ಎಂದು ಹಸನ್ ಅವರ ಪತ್ನಿ ಸಬಾನಾ ಮಾಧ್ಯಮಗಳ ಮುಂದೆ ದುಃಖವನ್ನು ತೋಡಿಕೊಂಡಿದ್ದಾರೆ.
ದೆಹಲಿ ಅಭಿವೃದ್ಧಿ ಪ್ರಾಧಿಕಾರ (Delhi Development Authority) ಅಧಿಕಾರಿಗಳು ಮನೆಗೆ ಬಂದಾಗ ನಮ್ಮ ಮಗ ಮತ್ತು ಮಗಳು ಮಾತ್ರ ಮನೆಯಲ್ಲಿ ಇದ್ದರು. ಈ ವೇಳೆ ಬೇರೆ ಯಾರು ಮನೆಯಲ್ಲಿ ಇರಲಿಲ್ಲ. ಬಳಿಕ ಮಾಹಿತಿ ತಿಳಿದು ನಾನು ಮತ್ತು ನನ್ನ ಪತಿ ಇಲ್ಲಿಗೆ ಬಂದು ಅಧಿಕಾರಿಗಳಿಗೆ ಮನವಿ ಮಾಡಿಕೊಂಡೆವು. ಉತ್ತರಾಖಂಡ್ನ ಸುರಂಗದಲ್ಲಿ ಸಿಲುಕಿದವರ ರಕ್ಷಣೆಯಲ್ಲಿ ಹಸನ್ ಪಾತ್ರವನ್ನು ತಿಳಿಸಿದೆವು ಆದರೂ ಅಧಿಕಾರಿಗಳು ಮನೆಯನ್ನು ಕೆಡವಿದ್ದಾರೆ ಎಂದು ಸಬಾನಾ ಅವರು ಹೇಳಿಕೊಂಡಿದ್ದಾರೆ.
ಇನ್ನೂ ಉತ್ತರಕಾಶಿಯ ಸಿಲ್ಕ್ಯಾರಾ ಬರ್ಕೋಟ್ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯಲ್ಲಿ ವಕೀಲ್ ಅವರ ಕೊಡುಗೆಯ ಬಗ್ಗೆ ನಮಗೆ ತಿಳಿದಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪರೀಕ್ಷೆಯಲ್ಲಿ ತಪ್ಪಿಸಿಕೊಂಡ ನಂತರ ಅಲಿಜಾ ತನ್ನ ಶಿಕ್ಷಕರೊಂದಿಗೆ ಮಾತನಾಡಿದ್ದಾಳೆ, ಅವರು ಸಹಾಯ ಮಾಡುವ ಭರವಸೆ ನೀಡಿದ್ದಾರೆ ಎಂದು ಅವರು ತಿಳಿದು ಬಂದಿದೆ.