ಬಾಗಲಕೋಟೆ: ಮನೆಯವರ ವಿರೋಧ ಕಟ್ಟಿಕೊಂಡು ಒಂದಾದ ಪ್ರೇಮಿಗಳಿಬ್ಬರು (Lovers) ಮರ್ಯಾದಾ ಹತ್ಯೆಯಾಗಿರುವ (Honor Killing) ಘಟನೆ ಬಾಗಲಕೋಟೆ (Bagalkot) ತಾಲೂಕಿನ ಬೇವಿನಮಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವಿಶ್ವನಾಥ್ ನೆಲಗಿ(24) ಹಾಗೂ ರಾಜೇಶ್ವರಿ(18) ಹತ್ಯೆಯಾದ ಪ್ರೇಮಿಗಳು. ಸುಮಾರು 4-5 ವರ್ಷಗಳಿಂದ ವಿಶ್ವನಾಥ್ ಹಾಗೂ ರಾಜೇಶ್ವರಿ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ ರಾಜೇಶ್ವರಿಯ ಮನೆಯವರಿಗೆ ಈ ವಿಷಯ ತಿಳಿದು ವಿಶ್ವನಾಥ್ಗೆ ಈ ಹಿಂದೆಯೇ 2 ಬಾರಿ ಮನಬಂದಂತೆ ಹಲ್ಲೆಮಾಡಿದ್ದರು.
ಇದಾದ ಬಳಿಕ ವಿಶ್ವನಾಥ್ನ ಮನೆಯವರು ಆತನನ್ನು ಕೂಲಿ ಕೆಲಸಕ್ಕೆಂದು ಕೇರಳದ ಕಾಸರಗೋಡಿಗೆ ಕಳುಹಿಸಿದ್ದರು. ಆದರೆ ರಾಜೇಶ್ವರಿಯ ತಂದೆ ಪರಸಪ್ಪ ಕರಡಿ ಇಬ್ಬರನ್ನೂ ಒಂದು ಮಾಡಿಸುವುದಾಗಿ ನಂಬಿಸಿ, ವಿಶ್ವನಾಥ್ನನ್ನು ಊರಿಗೆ ಬರುವಂತೆ ಹೇಳಿದ್ದಾರೆ. ವಿಶ್ವನಾಥ್ ಕಾಸರಗೋಡಿನಿಂದ ನರಗುಂದ ಬಳಿ ಬರುತ್ತಿದ್ದಂತೆ ಆತನನ್ನು ಬೊಲೆರೊ ವಾಹನದಲ್ಲಿ ಕರೆದೊಯ್ದು ಕೊಲೆಮಾಡಿದ್ದಾರೆ. ಇದನ್ನೂ ಓದಿ: ಕರುಳು ಹರಿದು ಮಗುವನ್ನು ಕೊಂದ ಬೀದಿ ನಾಯಿಗಳು – ನಿವಾಸಿಗಳಿಂದ ಆಕ್ರೋಶ
ಅಕ್ಟೋಬರ್ 1 ರಂದು ನಸುಕಿನ ಜಾವ ಟಂಟಂ ಏಸ್ ವಾಹನದಲ್ಲಿ ರಾಜೇಶ್ವರಿಯ ಕುತ್ತಿಗೆಗೆ ವೇಲ್ ಬಿಗಿದು ಕೊಲೆ ಮಾಡಿದರೆ, ಪ್ರಿಯಕರ ವಿಶ್ವನಾಥ್ನನ್ನು ಬೊಲೆರೊ ವಾಹನದಲ್ಲಿಯೇ ಮರ್ಮಾಂಗ ಹಾಗೂ ಎದೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ.
ಅಲ್ಲಿಂದ ಇಬ್ಬರ ಮೃತ ದೇಹಗಳನ್ನು ಕ್ರೂಸರ್ ವಾಹನದಲ್ಲಿ ಕೊಂಡೊಯ್ದಿದ್ದಾರೆ. ಶವಗಳನ್ನು ಹುನಗುಂದ ಎನ್ಹೆಚ್ 50ಯ ಕೃಷ್ಣಾ ನದಿ ಬ್ರಿಡ್ಜ್ ಮೇಲೆ ಕೊಂಡೊಯ್ದು, ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಶವಗಳ ಮೇಲಿನ ಬಟ್ಟೆ ಬಿಚ್ಚಿ, ಹರಿಯುತ್ತಿದ್ದ ಕೃಷ್ಣಾ ನದಿಗೆ ಎಸೆದಿದ್ದಾರೆ. ನಂತರ ಅವರಿಬ್ಬರ ಬಟ್ಟೆಗಳನ್ನು ಸಂಗಮ ಕ್ರಾಸ್ ಬಳಿ ತಂದು ಸುಟ್ಟು ಹಾಕಿದ್ದಾರೆ. ಇದನ್ನೂ ಓದಿ: ಜಯಲಲಿತಾ ಸಾವಿಗೆ ಆಪ್ತೆ ಶಶಿಕಲಾ ಕಾರಣ – ಸರ್ಕಾರಕ್ಕೆ ವರದಿ ಸಲ್ಲಿಕೆ
ಇದೀಗ ಪೊಲೀಸರು ಆರೋಪಿಗಳಾದ ರವಿ ಹುಲ್ಲನ್ನವರ, ಹನುಮಂತ ಮಲ್ಲಾಡದ, ಬೀರಪ್ಪ ದಳವಾಯಿಯನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನುಳಿದ ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆ. ಹತ್ಯೆಯಾದ ಪ್ರೇಮಿಗಳಿಬ್ಬರ ಶವಗಳು ಇನ್ನೂ ಪತ್ತೆಯಾಗದ ಹಿನ್ನೆಲೆ ಹುಡುಕಾಟ ಮುಂದುವರಿದಿದೆ.