ಶ್ರೀನಗರ: ಅಮರನಾಥ ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸುವ ಯಾವುದೇ ಯೋಜನೆ ಇಲ್ಲ ಯಾತ್ರಾರ್ಥಿಗಳು ನಮ್ಮ ಅತಿಥಿಗಳು ಎಂದು ಉಗ್ರ ಸಂಘಟನೆಯಾದ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ರಿಯಾಜ್ ಅಹಮದ್ ನಾಯ್ಕೊ ತಿಳಿಸಿದ್ದಾನೆ.
ಕೆಲ ಸೋಶಿಯಲ್ ಮಿಡಿಯಾಗಳಲ್ಲಿ ಈ ಕುರಿತು 15 ನಿಮಿಷದ ಆಡಿಯೋ ಕ್ಲಿಪ್ ವೈರಲ್ ಆಗಿದೆ. ಆಡಿಯೋದಲ್ಲಿ ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸುವುದಿಲ್ಲವೆಂದು ಮುಜಾಹಿದ್ದೀನ್ ಸಂಘಟನೆಯ ಕಮಾಂಡರ್ ರಿಯಾಜ್ ಅಹಮದ್ ನಾಯ್ಕೊ ತಿಳಿಸಿದ್ದು, ಧ್ವನಿ ಕಮಾಂಡರ್ದೆ ಎಂದು ಗುರುತಿಸಲಾಗಿದೆ.
ಏನಿದೆ ಆಡಿಯೋದಲ್ಲಿ?
ಅಮರನಾಥ ಯಾತ್ರಾರ್ಥಿಗಳು ಯಾವುದೇ ಭದ್ರತೆ ಇಲ್ಲದೆ ಯಾತ್ರೆ ಪೂರೈಸಬಹುದು. ನೀವು ನಮ್ಮ ಅತಿಥಿಗಳಾಗಿದ್ದು, ನಾವು ಯಾವತ್ತಿಗೂ ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸಿಲ್ಲ, ಮುಂದೆಯೂ ದಾಳಿ ನಡೆಸುವುದಿಲ್ಲ. ಧಾರ್ಮಿಕ ಇಷ್ಟಾರ್ಥದ ಪೂರೈಕೆಗೆ ಬರುವ ಯಾತ್ರಿಗಳ ವಿರುದ್ಧ ನಮ್ಮ ಹೋರಾಟ ಅಲ್ಲ ಎಂದು ತಿಳಿಸಿದ್ದಾನೆ.
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಕಮಾಂಡರ್ ಆದ ರಿಯಾಜ್ ಅಹಮದ್ ನಾಯ್ಕೊ, ನಟೋರಿಯಸ್ ಉಗ್ರನಾಗಿದ್ದು, ಇವನು ದಕ್ಷಿಣ ಕಾಶ್ಮೀರದಲ್ಲಿ ಭದ್ರತಾ ಪಡೆಯ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿದ್ದಾನೆ. ಇದನ್ನೂ ಓದಿ: ಉಗ್ರರ ದಾಳಿ ಭೀತಿ: ಅಮರನಾಥ ಯಾತ್ರೆಗೆ ಹೆಚ್ಚಿದ ಭದ್ರತೆ!
ಕಳೆದ ವರ್ಷ ಅನಂತ್ನಾಗ್ ನಲ್ಲಿ ಅಮರನಾಥ ಯಾತ್ರಾರ್ಥಿಗಳ ಬಸ್ ಮೇಲೆ ಉಗ್ರರು ದಾಳಿ ನಡೆಸಿ 8 ಮಂದಿ ಭಕ್ತರು ಸಾವಿಗೀಡಾಗಿದ್ದರು. ಈ ಬಾರಿಯೂ ಅಮರನಾಥ ಯಾತ್ರೆಗೆ ಉಗ್ರರ ಕರಿನೆರಳು ಬೀರಿದ ಹಿನ್ನೆಲೆಯಲ್ಲಿ ಸರ್ಕಾರ ಸಾಕಷ್ಟು ಭದ್ರತಾ ಕ್ರಮಗಳನ್ನು ಕೈಗೊಂಡಿತ್ತು. ಅಮರನಾಥ ಯಾತ್ರೆಗೆ ಈವರೆಗೂ ದೇಶಾದ್ಯಂತ ಒಟ್ಟು 2 ಲಕ್ಷ ಯಾತ್ರಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇಂದು ಮೊದಲನೇ ಹಂತದಲ್ಲಿ ಸೇನೆಯ ಭದ್ರತೆಯೊಂದಿಗೆ 3,000 ಯಾತ್ರಾರ್ಥಿಗಳು ಅಮರನಾಥಾಗೆ ಪ್ರಯಾಣ ಬೆಳೆಸಿದ್ದಾರೆ.
https://www.youtube.com/watch?v=REGmxw63OZ4