ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ಶಾಲಾ ಆವರಣದಲ್ಲಿ ಬಂದೂಕು ತರಬೇತಿ ಬಗ್ಗೆ ರಾಜ್ಯಾದ್ಯಂತ ಸಾಕಷ್ಟು ಚರ್ಚೆ ನಡೆದು ತಣ್ಣಗಾಗುವ ಹೊತ್ತಿಗೆ ಇದೀಗಾ ಕೊಡಗಿನ ಗ್ರಾಮಯೊಂದರಲ್ಲಿ ನಡೆದ ಬುರ್ಖಾ ಡ್ಯಾನ್ಸ್ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ಧರ್ಮ ದಂಗಲ್ ನಡೆಯುತ್ತಿದೆ. ಈ ನಡುವೆ ಶಾಂತಿ ಪ್ರಿಯ ಜಿಲ್ಲೆ ಕೊಡಗು ಜಿಲ್ಲೆಯಲ್ಲೂ ಕಳೆದ ಕೆಲ ದಿನಗಳ ಹಿಂದೆ ಕೊಡಗಿನ ಪೊನ್ನಂಪೇಟೆ ತಾಲೂಕಿನ ಸಾಯಿ ಶಂಕರ ಶಾಲಾ ಆವರಣದಲ್ಲಿ ಬಂದೂಕು ತರಬೇತಿ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಇದೀಗ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದಲ್ಲಿ ಬುರ್ಖಾ ಹಾಕಿ ಕೆಲ ಯುವಕರು ನೃತ್ಯ ಮಾಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಶಾಲೆ ಆವರಣದಲ್ಲೇ ಭಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ, ಶಸ್ತ್ರಾಸ್ತ್ರ ತರಬೇತಿ
ಕೊಳಕೇರಿ ಗ್ರಾಮದಲ್ಲಿ ಮೇ 28 ಮತ್ತು 29ರಂದು ಪಶ್ಚಿಮ ಕೊಳಕೇರಿ ಗ್ರಾಮಾಭಿವೃದ್ದಿ ಸಂಘದ ವಜ್ರಮಹೋತ್ಸವ ಆಚರಣೆಯನ್ನು ಪಶ್ಚಿಮ ಕೊಳಕೇರಿ ರಮೇಶ್ ಮುದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು. ಈ ವೇಳೆ ವೇದಿಕೆ ಕಾರ್ಯಕ್ರಮದಲ್ಲಿ ಕೆಲ ಯುವಕರು ಬುರ್ಖಾ ಹಾಕಿ ಕೊಡವ ವಾಲಗಕ್ಕೆ ನೃತ್ಯ ಮಾಡಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜಿಲ್ಲೆಯ ಮುಸ್ಲಿಂ ಸಮುದಾಯದ ಮುಖಂಡರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಮುಸ್ಲಿಂ ಧಾರ್ಮಿಕ ಉಡುಪುಗಳಿಗೆ ಅಪಮಾನ ಮಾಡಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮದ್ಯದ ಚಟ ಬಿಡಿಸಲು ತಂದೆಗೆ ತಂದಿದ್ದ ಜೌಷಧಿಯನ್ನು ಸೇವಿಸಿ ಬಾಲಕ ಸಾವು
ಈ ನೃತ್ಯದ ಬಗ್ಗೆ ಪಶ್ಚಿಮ ಕೊಳಕೇರಿ ಗ್ರಾಮಾಭಿವೃದ್ದಿ ಸಂಘದ ಪ್ರಮುಖರು ಮಾತನಾಡಿ, ಈ ನೃತ್ಯ ಮಾಡಿರುವುದು ಯಾವುದೇ ಧರ್ಮದ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಉದ್ದೇಶದಿಂದ ಅಲ್ಲ. ಕೇವಲ ಮನರಂಜನೆಗೆ ಮಾತ್ರ ಕೆಲ ಯುವಕರು ಬುರ್ಖಾ ಧರಿಸಿಕೊಂಡು ನೃತ್ಯ ಮಾಡಿದ್ದಾರೆ. ಕೊಡಗಿನಲ್ಲಿ ಸಾಕಷ್ಟು ಶಾಲಾ ಕಾಲೇಜಿನಲ್ಲಿ ಇರುವ ಮುಸ್ಲಿಂ ಹೆಣ್ಣು ಮಕ್ಕಳು ಶಾಲೆಯ ಕಾರ್ಯಕ್ರಮಗಳಲ್ಲಿ ಕೊಡವ ಉಡುಗೆ ತೊಡುಗೆಗಳನ್ನು ಹಾಕಿ ನೃತ್ಯ ಮಾಡುತ್ತಾರೆ. ಅವರು ಮಾಡುವ ನೃತ್ಯಗಳನ್ನು ನೋಡಿದ್ರೆ ನಮಗೂ ನಮ್ಮ ಜಿಲ್ಲೆಯ ಸಂಸ್ಕೃತಿಯನ್ನು ಬಿಂಬಿಸುತ್ತಾರೆ ಎನ್ನುವ ಖುಷಿ ಇದೆ. ನಾವು ಯಾವತ್ತು ಆಕ್ಷೇಪಣೆ ಮಾಡಿಲ್ಲ. ಆದರೆ ಇದೀಗ ಈ ನೃತ್ಯದ ಬಗ್ಗೆ ಸುಮ್ಮನೆ ಅಪಪ್ರಾಚಾರ ಮಾಡುತ್ತಿದ್ದಾರೆ ನಮ್ಮ ಗ್ರಾಮದಲ್ಲಿ ಎಲ್ಲಾ ಜನಾಂಗೀಯ ಜನರು ಒಟ್ಟಾಗಿ ಸಹಬಾಳ್ವೆಯಿಂದ ಬದುಕು ನಡೆಸುತ್ತಿದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.