ಮತಪಟ್ಟಿ ಅಕ್ರಮ; ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಸುಮೋಟೊ ಕೇಸ್ ಹಾಕಿ ತನಿಖೆ ಮಾಡಬೇಕು – ಡಿಕೆಶಿ

Public TV
4 Min Read
DK SHIVAKUMAR 2

ಬೆಂಗಳೂರು: ಮತಪಟ್ಟಿ ಅಕ್ರಮ ಪ್ರಕರಣವನ್ನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸುಮೋಟೊ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ತಿಳಿಸಿದ್ದಾರೆ.

ಮತದಾನ ಪಟ್ಟಿ ಅಕ್ರಮ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾವೇನಾದ್ರು ಚಿಲುಮೆ ಸಂಸ್ಥೆಗೆ ಅನುಮತಿ ಕೊಟ್ಟು ದುರ್ಬಳಕೆ ಮಾಡಿದ್ರೆ ಕೂಡಲೇ ಎಲ್ಲರನ್ನು ಬಂಧನ ಮಾಡಲಿ. ನಮ್ಮ ಅವಧಿಯಲ್ಲಿ ಯಾವ್ ಅಧಿಕಾರಿ, ಯಾವ ಮಂತ್ರಿ ಕೊಟ್ಟಿದ್ದಾರೊ ನನಗೆ ಗೊತ್ತಿಲ್ಲ. ಇದೊಂದು ಗಂಭೀರ ಅಪರಾಧ. ನಾಳೆ ಮಧ್ಯಾಹ್ನ ಚುನಾವಣೆ ಆಯೋಗ ಭೇಟಿಗೆ ನಾವು ಸಮಯ ಕೇಳಿದ್ದೇವೆ. ನಾಳೆ ನಾನು, ಸಿದ್ದರಾಮಯ್ಯ ಎಲ್ಲರೂ ಆಯೋಗದ ಆಯುಕ್ತರನ್ನ ಭೇಟಿ ಆಗ್ತೀವಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಎಂ, ಕಮಿಷನರ್ ಅನುಮತಿ ಇಲ್ಲದೆ ಮಾಡಲು ಆಗುತ್ತಾ?- ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಆಗ್ರಹ

VOTE
ಸಾಂದರ್ಭಿಕ ಚಿತ್ರ

ಬಿಬಿಎಂಪಿ ಆಯುಕ್ತ ಗೌರವ ಗುಪ್ತ ಮೊದಲು ಆರ್ಡರ್ ಮಾಡಿ ಬಳಿಕ ಕ್ಯಾನ್ಸಲ್ ಮಾಡಿದ್ದಾರೆ. 7-8 ಸಾವಿರ ಜನರ ಸರ್ವೆ ಮಾಡ್ತಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರು ತೆಗೆದಿದ್ದಾರೆ ಅಂತ ಒಬ್ಬ ಹುಡುಗ ಹೇಳಿದ್ದಾನೆ. ನನ್ನ ಬಳಿ ಅ ಸಂಸ್ಥೆಯ ಪೂರ್ತಿ ಮಾಹಿತಿ ಇದೆ. ನಿನ್ನ ಕ್ಷೇತ್ರದಲ್ಲಿ ಗೆಲ್ಲಿಸಿ ಕೊಡ್ತೀವಿ ಅಂತ ಒಬ್ಬೊಬ್ಬ ಕಾರ್ಪೋರೇಟರ್‌ಗಳಿಗೆ ಕೋಟಿ ಹಣ ಆಫರ್ ಮಾಡಿದ್ದಾರೆ. ನಾವು ಅ ಸಂಸ್ಥೆಯ ಬಗ್ಗೆ ತನಿಖೆ ಮಾಡಿಯೇ ಮಾತಾಡ್ತಿದ್ದೇವೆ. ಸಿಎಂ ಉಡಾಫೆಯಾಗಿ ಮಾತಾಡೋದು ಸರಿಯಲ್ಲ. ಸಿಎಂ ಬೆಂಗಳೂರು ಉಸ್ತುವಾರಿ. ಇದಕ್ಕೆ ಅವರೇ ಜವಾಬ್ದಾರಿ. ಯಾವ ಯಾವ ಕ್ಷೇತ್ರದಲ್ಲಿ ಎಷ್ಟು ವೋಟರ್ ಐಡಿ ಹೀಗೆ ಆಗಿದೆ ಗೊತ್ತಿಲ್ಲ. ಪ್ರತಿಯೊಂದು ಕ್ಷೇತ್ರದಲ್ಲಿ ಮ್ಯಾಪಿಂಗ್ ಮಾಡಿದ್ದಾರೆ. ಮನೆ ಮನೆಗೆ ಹೋಗಿ ಬರೆದುಕೊಂಡು ಹೋಗಿದ್ದಾರೆ.‌ ಖಾಲಿ ಸೈಟ್ ಕೂಡಾ ಗುರುತಿಸಿದ್ದಾರೆ ಎಂದು ವಿವರಿಸಿದ್ದಾರೆ.

ಚುನಾವಣಾ ಆಯೋಗ ಕೂಡಾ ಇದರಲ್ಲಿ ಆರೋಪಿ. ಯಾಕೆ ಇದುವರೆಗೂ ಚುನಾವಣೆ ಆಯೋಗ ಕ್ರಮ ತೆಗೆದುಗೊಂಡಿಲ್ಲ? ನಾಳೆ ಮಧ್ಯಾಹ್ನ ಅವರನ್ನ ಭೇಟಿಯಾಗಿ ಮಾತಾಡ್ತೀವಿ. ಈ ಸಂಸ್ಥೆ ಮೇಲೆ ಕ್ರಮ ಆಗಬೇಕು. ಚಿಲುಮೆ‌ ಸಂಸ್ಥೆಯವರನ್ನ ಸಿಎಂ ಮತ್ತು ಮಂತ್ರಿಗಳು ರಕ್ಷಣೆ ಮಾಡ್ತಿದ್ದಾರೆ. ರಿಟರ್ನಿಂಗ್ ಆಫೀಸ್ ಮೇಲೆ FIR ಆಗಬೇಕು.‌ ಪ್ರತಿ ಕ್ಷೇತ್ರದಲ್ಲಿ ಆಗಬೇಕು. ಸರ್ಕಾರದ ಹುದ್ದೆಗೆ ಹೀಗೆ ಮಾಡೋಕೆ ಆಗೊಲ್ಲ. ಸಿಎಂ ಉಡಾಫೆ ಆಗಿ ಮಾಡ್ತಿದ್ದಾರೆ. ನಮ್ಮ ಸರ್ಕಾರದಲ್ಲಿ ಆರ್ಡರ್ ಮಾಡಿದ್ರೆ ಕ್ರಮ ಆಗಲಿ. ಇಡೀ ದೇಶದಲ್ಲಿ ‌ಇದು ಸುದ್ದಿ ಆಗುತ್ತಿದೆ. ಇದರ ಗಂಭೀರತೆ ಅರ್ಥ ಮಾಡಿಕೊಳ್ಳಬೇಕು. ಚುನಾವಣೆಯಲ್ಲಿ ಗೆಲ್ಲೋಕೆ ಹೀಗೆ ಈ ಸರ್ಕಾರ ಮಾಡ್ತಿದೆ. ಜೆಡಿಎಸ್, ರೈತ ಸಂಘ ಎಲ್ಲಾ ಪಾರ್ಟಿಗಳು ಎಚ್ಚರಿಕೆಯಿಂದ ಇರಬೇಕು. ನಿಮ್ಮ ನಿಮ್ಮ ‌ಕ್ಷೇತ್ರದ ಮತಪಟ್ಟಿ ಪರಿಶೀಲನೆ ಮಾಡಿ. ಮತಪಟ್ಟಿ ಸ್ಥಳವೇ ಬದಲಾವಣೆ ಮಾಡ್ತಿದ್ದಾರೆ. ಆಫೀಸರ್‌ಗಳನ್ನು ಇಟ್ಟುಕೊಂಡು ಈ ಕೆಲಸ ಮಾಡ್ತಿದ್ದಾರೆ. ಪ್ರತಿಯೊಂದು ಬೂತ್‌ನಲ್ಲಿ ನಮ್ಮ ಕಾರ್ಯಕರ್ತರು BLOಗೆ ಮಾಹಿತಿ ಕೊಟ್ಟು ಸಹಕಾರ ನೀಡಿ. ಒಂದು ವೋಟ್ ಇಟ್ಟುಕೊಂಡು ಮತ ಹಾಕಿ. 26 ಲಕ್ಷ ವೋಟ್ ವಜಾ‌ ಮಾಡಿದ್ದೇವೆ ಅಂತ ಹೇಳಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ 30-40 ಸಾವಿರ ಸೇರಿಸಿದ್ದಾರೆ ಅಂತ ಹೇಳ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಚಿಲುಮೆ ಸಂಸ್ಥೆ ವಿರುದ್ಧ ಆರೋಪ ಬೆನ್ನಲ್ಲೇ ರಾಜ್ಯದಲ್ಲಿ 6 ಲಕ್ಷ ಮತದಾರರ ಹೆಸರು ಡಿಲೀಟ್‌

BBMP

ಚಿಲುಮೆ ಸಂಸ್ಥೆಯ ರೂಟ್ ಮ್ಯಾಪ್ ಪ್ರದರ್ಶನ ಮಾಡಿದ ಡಿ.ಕೆ.ಶಿವಕುಮಾರ್,‌ ಬಿಬಿಎಂಪಿ ಅನುಮತಿ ನೀಡಿದೆ ಅಂತ ಮ್ಯಾಪ್‌ನಲ್ಲಿ ಇದೆ. ಅವರ ಸಿಬ್ಬಂದಿಯನ್ನೇ ಕರೆದು ಮಾಹಿತಿ ಪಡೆದಿದ್ದೇನೆ. ಬಿಜೆಪಿ ವಿರುದ್ದ ಇರೋ ವೋಟ್ ಡಿಲೀಟ್ ಮಾಡೋಕೆ ಕೆಲಸ ಮಾಡ್ತಿದ್ದಾರೆ. ಯಾರ ಸರ್ಕಾರದಲ್ಲೇ ಆಗಲಿ, ಹೀಗೆ ಮಾಡಿದ್ರೆ ಕ್ರಮ ಆಗಲಿ. ಡಿ.ಕೆ.ಶಿವಕುಮಾರ್ ಆದರೇನು ಯಾರು ಮಾಡಿದರೇನು ಕ್ರಮ ಆಗಲಿ ಅಂತ ಒತ್ತಾಯ ಮಾಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ಜಾತಿಗಣತಿ ಮಿಸ್ ಮಾಡಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಾಗೇನಾದ್ರು ಇದ್ದರೆ ನೀವು ಆಕ್ಷನ್ ತಗೊಳ್ಳಿ. ಮತಪಟ್ಟಿ ‌ನನ್ನ ಹಕ್ಕು. ಅದನ್ನ ‌ದುರುಪಯೋಗ ಮಾಡಿದ್ರೆ ಹೇಗೆ? ನಮ್ಮ ಭ್ರಷ್ಟಾಚಾರವನ್ನೆ ತನಿಖೆ ಮಾಡಿ ಅಂತಿದ್ದೇವೆ. ಇನ್ನು ಜಾತಿಗಣತಿ ತನಿಖೆ ಮಾಡಬೇಡಿ ಅಂತೀವಾ? ಮಾಧ್ಯಮದಲ್ಲಿ ಸುದ್ದಿ ಬಂದ ಕೂಡಲೇ ಬಿಬಿಎಂಪಿ ಕಮಿಷನರ್ ಸಂಸ್ಥೆಗೆ ನೀಡಿದ್ದ ಆದೇಶ ರದ್ದು ಮಾಡಿದರು. ಯಾಕೆ ಕ್ರಿಮಿನಲ್ ಕೇಸ್ ಹಾಕಲಿಲ್ಲ? ಯಾಕೆ FIR ಹಾಕಿ ಬಂಧನ ಮಾಡಿಲ್ಲ? ಯಾರು ಅನುಮತಿ ಕೊಟ್ರೋ ಅವರನ್ನ ಬಂಧನ ಮಾಡಬೇಕು. EVM ಬಗ್ಗೆ ಮಾತಾಡಿದ್ದಾರೆ. ಇಡೀ ದೇಶ ಆ ಬಗ್ಗೆ ಚರ್ಚೆ ಮಾಡುತ್ತಿದೆ. ಯಾರು ಅಕ್ರಮ ಮಾಡಿದ್ದಾರೋ, ಅವರ ಬಂಧನ ಆಗಲಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಸಿಂಗಾಪುರ ಕೆರೆ ಮರುನಾಮಕರಣಕ್ಕೆ ಭಾರೀ ವಿರೋಧ

ಸಚಿವ ಅಶ್ವಥ್ ನಾರಾಯಣ ಮಾನನಷ್ಟ ಮೊಕದ್ದಮೆ ಕೇಸ್ ಹಾಕ್ತೀವಿ ಅನ್ನೋ ಹೇಳಿಕೆ ಕುರಿತು ಮಾತನಾಡಿ, ‌ಮಾನನಷ್ಟ ಮೊಕದ್ದಮೆ ಹಾಕಲಿ. ಅವರು ಕಾಯೋದುಬೇಡ. ಮೊದಲು ಮಾನನಷ್ಟ ಮೊಕದ್ದಮೆ ಕೇಸ್ ಹಾಕಲಿ. ಇದರ ಬಗ್ಗೆ ಎಲ್ಲವೂ ಚರ್ಚೆ ಆಗಲಿ. ಯಾರಿಗೆ ಕಾಲ್ ಮಾಡಿದ್ದಾರೆ, ಎಷ್ಟು ಕಾಲ್ ಮಾಡಿದ್ದಾರೆ. ಯಾರ ಜೊತೆ ಮಾತಾಡಿದ್ದಾರೆ ಎಲ್ಲವೂ ತನಿಖೆ ಆಗಲಿ. ಅವಮಾನ ಆಗಿದ್ರೆ ಅಶ್ವಥ್ ನಾರಾಯಣ ಅವರು ಮಾನನಷ್ಟ ಕೇಸ್ ಹಾಕಲಿ. ಮಾಜಿ ಸಿಎಂ ಕುಮಾರಸ್ವಾಮಿ ಏನಾದ್ರು ಹೇಳಲಿ. ನಾನು ಜವಾಬ್ದಾರಿಯುತ ಪಕ್ಷದ ಅಧ್ಯಕ್ಷ ಹಾಗೂ ಮತದಾರನಾಗಿ ಹೇಳ್ತಿದ್ದೇನೆ. 24 ಗಂಟೆ ಒಳಗೆ ತಪ್ಪಿತಸ್ಥರನ್ನ ಅರೆಸ್ಟ್ ಮಾಡಬೇಕು. ಇಲ್ಲದೆ ಹೋದರೆ ಆಯೋಗ ಇದರಲ್ಲಿ ಶಾಮೀಲು‌ ಅಂತ ಆಗುತ್ತೆ. ಮುಂದೆ ನಾವು ಇದನ್ನ ದೆಹಲಿ ಆಯೋಗಕ್ಕೂ ತೆಗೆದುಕೊಂಡು ಹೋಗ್ತೀವಿ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸುಮೋಟೊ ಕೇಸ್ ತೆಗೆದುಕೊಂಡು ಇದರ ಬಗ್ಗೆ ತನಿಖೆ ನಡೆಸಬೇಕು. ಆಕ್ಸಿಜನ್ ದುರಂತದಲ್ಲಿ ಹೈಕೋರ್ಟ್‌ ಸುಮೋಟೊ ಕೇಸ್ ದಾಖಲು ಮಾಡಿಕೊಂಡಿತ್ತು. ಈ ಭ್ರಷ್ಟ, ನೀಚ ಸರ್ಕಾರದ ಅಧಿಕಾರಿಗಳನ್ನ ಬಂಧನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *