ಚಿಕ್ಕಬಳ್ಳಾಪುರ: ಬಯಲು ಸೀಮೆಯ ಬರದ ನಾಡು ಎಂದೇ ಖ್ಯಾತಿಯಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಮೇಲೆ ವರುಣ ಕರುಣೆ ತೋರಿದ್ದು, ಕಳೆದ 1 ವರ್ಷದಿಂದ ಮಳೆ ನಾಡಿನಂತಾಗಿದೆ.
ಎಲ್ಲಿ ನೋಡಿದರೂ ಹಚ್ಚ ಹಸಿರು ಜೊತೆಗೆ ಮಳೆಯ ಆರ್ಭಟ. ಇದೀಗ ಸುರಿಯುತ್ತಿರುವ ಮಳೆಗೆ ಮರ ಬಿದ್ದು ಅವಾಂತರ ಸೃಷ್ಟಿಯಾಗಿದೆ. ಕೆಲವೆಡೆ ಬೆಳೆಗಳು ಜಲಾವೃತವಾದರೆ, ಇನ್ನೂ ಕೆಲವೆಡೆ ಮಳೆಯ ನೀರು ರಸ್ತೆಗಳನ್ನೇ ನುಗ್ಗಿದೆ.
ಮಳೆ ಮಳೆ ಎಂದು ಹಾತೊರೆಯುತ್ತಿದ್ದ ಬಯಲು ಸೀಮೆಯ ಜನ, ಈಗ ಮಳೆಯ ಹೆಸರು ಕೇಳಿದರೆ ಕೆಲಕಾಲ ಅವಕ್ಕಾಗುತ್ತಾರೆ. ಕಳೆದ ನವೆಂಬರ್-ಡಿಸೆಂಬರ್ನಲ್ಲಿ ಸುರಿದ ಮಳೆಯ ಅವಾಂತರಗಳನ್ನು ಇನ್ನೂ ಸುಧಾರಿಸಿಕೊಳ್ಳಲು ಆಗಿಲ್ಲ. ಈಗಲೂ ಹಗಲು ರಾತ್ರಿ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಕೆಲವೆಡೆ ಬೆಳೆಗಳು ಜಲಾವೃತವಾದರೆ, ಇನ್ನೂ ಕೆಲವೆಡೆ ಮೋರಿಗಳು, ರಸ್ತೆಗಳು, ಬ್ರಿಡ್ಜ್ಗಳು ಜಲಾವೃತವಾಗಿದೆ. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಭಾರೀ ಪ್ರವಾಹಕ್ಕೆ 25 ಜನ ಬಲಿ- ಅಪಾಯದ ಸುಳಿಯಲ್ಲಿ 40 ಲಕ್ಷ ಮಂದಿ
ಚಿಕ್ಕಬಳ್ಳಾಪುರ ತಾಲೂಕಿನ ಸುಲ್ತಾನ್ ಪೇಟೆಯಲ್ಲಿ ಬೃಹತ್ ಗಾತ್ರದ ಅರಳಿ ಮರ ಉರುಳಿ ಬಿದ್ದು, ಅವಾಂತರಗಳನ್ನೇ ಸೃಷ್ಟಿಸಿದೆ. ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ರಸ್ತೆಗೆ ಅಡ್ಡಲಾಗಿ ಸುಲ್ತಾನ್ ಪೇಟೆಯಲ್ಲಿ ಮರ ಬಿದ್ದಿರುವ ಕಾರಣ ದಿನವಿಡೀ ರಸ್ತೆ ಬಂದ್ ಆಗಿತ್ತು. ಮರದ ಬಳಿ ಇದ್ದ ಮನೆ ಅಂಗಡಿಯ ಮೇಲೂ ಮರ ಬಿದ್ದಿದೆ. ಸದ್ಯ ಯಾವುದೇ ಪ್ರಾಣಾಪಾಯ ಆಗಿಲ್ಲ. ಆದರೆ ವಿದ್ಯುತ್ ಲೈನ್ಗೆ ಮರ ಬಿದ್ದಿರುವ ಕಾರಣ 8 ವಿದ್ಯುತ್ ಕಂಬಗಳು ಮುರಿದು ಬಿದ್ದು, ವಿದ್ಯುತ್ ಸಂಪರ್ಕ ಸ್ಥಗಿತವಾಗಿದೆ. ಇದನ್ನೂ ಓದಿ: ವೇದಿಕೆಯಲ್ಲೇ ಪರಿಷ್ಕೃತ ಪಠ್ಯಪುಸ್ತಕದ ಪ್ರತಿ ಹರಿದು ಹಾಕಿದ ಡಿಕೆಶಿ
ಮತ್ತೊಂದೆಡೆ ನದಿ ನಾಲೆಗಳು ಉಕ್ಕಿ ಹರಿಯುತ್ತಿವೆ. ಬಾಗೇಪಲ್ಲಿ ತಾಲೂಕು ಚೇಳೂರು ಚಂಡ್ರಾಯಪನಲ್ಲಿ ಗ್ರಾಮದ ರಸ್ತೆ ಕೊಚ್ಚಿ ಹೋಗಿದೆ. ಜಕ್ಕಲಮಡುಗು ಜಲಾಶಯ ಉಕ್ಕಿ ಹರಿದು, ಸೇತುವೆ ನೀರಿನ ಬಳಿ ಜನರು ಮೀನು ಹಿಡಿಯುವ ಕಾಯಕದಲ್ಲಿ ತಲ್ಲೀನರಾಗಿದ್ದಾರೆ.