ಬೆಂಗಳೂರು: ದೀಪಾವಳಿ, ಕತ್ತಲೆಯನ್ನು ಅಳಿಸಿ ಬೆಳಕು ಮೂಡಿಸುವ ಹಬ್ಬ. ಆದರೆ ಬೆಂಗಳೂರಿನ ಪ್ರತಿ ಮನೆ ಮನೆಗಳಲ್ಲೂ ಪಟಾಕಿ, ಹಣತೆ ಹಚ್ಚುವ ಬದಲು ಕತ್ತಲೆ ಆವರಿಸಿದೆ. ಕಾರಣ, ದೀಪಾವಳಿ ಸಂಭ್ರಮದಲ್ಲಿದ್ದ ಸಿಲಿಕಾನ್ ಮಂದಿಗೆ ವರುಣದೇವ ಶಾಕ್ ನೀಡಿದ್ದಾನೆ. ರಾತ್ರಿ ಸುರಿದ ಭಾರೀ ಮಳೆಗೆ ಇಡೀ ಬೆಂಗಳೂರು ನಲುಗಿ ಹೋಗಿದೆ.
ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದಲ್ಲಿರೋ ಸಿಲಿಕಾನ್ ಸಿಟಿ ಮಂದಿಗೆ, ಮತ್ತೆ ವರುಣದೇವ ಅಘಾತ ತಂದಿದ್ದಾನೆ. ದೀಪಾ ಹಚ್ಚಿ, ಪಟಾಕಿ ಹೊಡೆಯುವ ಖುಷಿಯಲ್ಲಿರುವ ಬೆಂಗಳೂರು ಮಂದಿಯ ಖುಷಿಯನ್ನೇ ವರ್ಷಧಾರೆ ಕಸಿದಿದೆ. ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಇಡೀ ಬೆಂಗಳೂರು ಅಕ್ಷರಶಃ ತತ್ತರಿಸಿ ಹೋಗಿದೆ. ಅಲ್ಲದೇ ನಗರದ ಹಲವಾರು ರಸ್ತೆಗಳು ಸಂಪೂರ್ಣ ಜಲಾವೃತಗೊಂಡು ವಾಹನ ಸವಾರರು ಪರದಾಡಿದ್ದಾರೆ. ಇದನ್ನೂ ಓದಿ: ಮಂಗಳಮುಖಿಯರ ಪಾದಪೂಜೆ ಮಾಡುವ ಮೂಲಕ ದೀಪಾವಳಿ ಆಚರಿಸಿದ ವಿನಯ್ ಗುರೂಜಿ
ಭಾರೀ ಮಳೆಯಿಂದ, ಮಾಗಡಿ ರಸ್ತೆಯ ಟೋಲ್ಲ್ಗೇಟ್ ಬಳಿ ರಸ್ತೆಗಳು ಕೊಚ್ಚಿ ಹೋಗಿವೆ. ಪೈಪ್ ಲೈನ್ ಕಾಮಗಾರಿ ನಡೆಸಿದ್ದ ರಸ್ತೆಗಳಲ್ಲಿ ಮಾರುದ್ದು ಗುಂಡಿಗಳು ಬಿದ್ದಿವೆ. ಬಿಬಿಎಂಪಿ ಯಡವಟ್ಟಿಗೆ ಗುಂಡಿಯಲ್ಲಿ ಎರಡು ಕಾರುಗಳು ಲಾಕ್ ಆಗಿದ್ದವು. ತಕ್ಷಣವೇ ಸ್ಥಳಕ್ಕಾಗಮಿಸಿದ ಸಂಚಾರಿ ಪೊಲೀಸರು, ಕ್ರೇನ್ ಮೂಲಕ ಕಾರುಗಳನ್ನು ಮೇಲಕ್ಕೇತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಮಳೆಯಿಂದಾಗಿ ಬಿದ್ದಿದ್ದ ಗುಂಡಿಗಳನ್ನು ಜೆಸಿಬಿ ಮುಖಾಂತರ ಮುಚ್ಚಲಾಗಿದೆ.
ತಡರಾತ್ರಿ ಸುರಿದ ಭಾರೀ ಮಳೆಗೆ, ಕಸ್ತೂರಬಾ ನಗರದ ಎರಡನೇ ಕ್ರಾಸ್ನಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಮನೆಗಳಲ್ಲಿ ಮಂಡಿಯುದ್ದ ನೀರು ನಿಂತು, ಮನೆಗಳಿಂದ ನೀರು ಹೊರ ಹಾಕುವುದರಲ್ಲಿ ಜನರು ಸುಸ್ತಾಗಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನ ಹಲವೆಡೆ ಧಾರಾಕಾರ ಮಳೆ- ವಾಹನ ಸವಾರರ ಪರದಾಟ
ಇನ್ನು, ಭಾರೀ ಮಳೆಗೆ ಅಶೋಕ ಪಿಲ್ಲರ್ ಸಮೀಪದ ಮನೆಯ ಬೇಸ್ಮೆಂಟ್ ಒಳಗೂ ನೀರು ತುಂಬಿ ಅವಾಂತರ ಸೃಷ್ಟಿಸಿದೆ. ಮಳೆ ನೀರನ್ನ 2 ಮೋಟಾರ್ಗಳ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿ, ಹೊರ ಹಾಕುಲು ಹರಸಾಹಸಪಟ್ಟಿದ್ದಾರೆ. ಜೆ.ಸಿ ರಸ್ತೆಯ ಸುತ್ತಮುತ್ತ ಮೋರಿಗಳು ಕಟ್ಟಿಕೊಂಡು, ರಸ್ತೆಗಳು ಕೆರೆಯಂತಾಗಿ, ವಾಹನ ದಟ್ಟನೆ ಹೆಚ್ಚಾಗಿತ್ತು. ಇತ್ತ, ಊರ್ವಶಿ ಥಿಯೇಟರ್ ರಸ್ತೆಯ ಮೇಲೂ ಮಳೆ ನೀರು ನಿಂತು ಅವಾಂತರ ಸೃಷ್ಟಿಸಿತ್ತು. ಇದನ್ನೂ ಓದಿ: ದೀಪಾವಳಿ ಗಿಫ್ಟ್ ಅಲ್ಲ, ಪೆಟ್ರೋಲ್, ಡೀಸೆಲ್ ಬೆಲೆ ಇನ್ನೂ ಕಡಿಮೆಯಾಗಬೇಕು: ಸತೀಶ್ ಜಾರಕಿಹೊಳಿ
ಕೆ.ಆರ್.ಮಾರ್ಕೆಟ್, ಕಾರ್ಪೊರೇಷನ್, ಶಾಂತಿನಗರ, ಲಾಲ್ಬಾಗ್, ಸುಧಾಮನಗರ, ಟೌನ್ಹಾಲ್, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಭಾರೀ ಮಳೆಗೆ ವಾಹನ ಸವಾರರು ತತ್ತರಿಸಿ ಹೋಗಿದ್ದರು. ಧಾರಾಕಾರ ಮಳೆಗೆ ರಾಜಾಜಿನಗರದ ರಾಮಮಂದಿರ ಮೈದಾನ ಜಲಾವೃತವಾಗಿ, ಮೈದಾನದಲ್ಲಿದ್ದ ಪಟಾಕಿ ಮಳಿಗೆಗಳಿಗೆ ನೀರು ನುಗ್ಗಿ ಹಾನಿಯಾಗಿವೆ. ಇನ್ನು, ಶಾಂತಿನಗರದ ರಸ್ತೆಗಳು ಕೆರೆಯಂತಾಗಿದೆ. ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ರಾಜ್ಯದ ವಿವಿಧೆಡೆ ಭಾರೀ ಮಳೆಯಾಗಿದ್ದು, ಇನ್ನೂ ನಾಲ್ಕು ದಿನ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.