ಚೆನ್ನೈ: ಒಂದೇ ಶಾಲೆಯ 22 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರೌಢ ಶಾಲೆಯ ಮುಖ್ಯ ಶಿಕ್ಷಕನಿಗೆ ತಮಿಳುನಾಡು ವಿಶೇಷ ನ್ಯಾಯಾಲಯ 55 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
ಮಧುರೈ ಜಿಲ್ಲೆ ಪೊದಂಬು ಗ್ರಾಮದ ಪ್ರೌಢ ಶಾಲೆಯ ಹೆಡ್ಮಾಸ್ಟರ್ ಆಗಿದ್ದ ಆರೋಗ್ಯಸ್ವಾಮಿಗೆ ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ 3.4 ಲಕ್ಷ ರೂ. ದಂಡ ಹಾಗೂ 55 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಆರೋಗ್ಯ ಸ್ವಾಮಿ 7 ವರ್ಷದ ಹಿಂದೆ ಪಂಜು ಎಂಬವರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ದಲಿತ ದೌರ್ಜನ್ಯದ ಅಡಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸಿದ ವೇಳೆ ಈತ 22 ವಿದ್ಯಾರ್ಥಿನಿಯರು ಮತ್ತು ಬಾಲಕರ ಮೇಲೂ ದೌರ್ಜನ್ಯ ಎಸಗಿದ್ದ ಎನ್ನುವ ವಿಚಾರ ಬಯಲಾಗಿತ್ತು.
ಈತನ ಕೃತ್ಯಕ್ಕೆ ಸಾಕ್ಷಿಯಾಗಿದ್ದ ಸಿ ಅಮಲಿ ರೋಸ್, ಷಣ್ಮುಗ ಕುಮಾರಸ್ವಾಮಿ ಮತ್ತು ವಿಕ್ಟರ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ ಕೋರ್ಟ್ ಅವರನ್ನು ನಿರ್ದೋಷಿಗಳು ಎಂದು ತೀರ್ಪು ನೀಡಿದೆ. ದಂಡದ ಮೊತ್ತವಾದ 3.4 ಲಕ್ಷ ರೂ. ಹಣವನ್ನು ದೌರ್ಜನ್ಯಕ್ಕೆ ಒಳಗಾದ 22 ವಿದ್ಯಾರ್ಥಿನಿಯರಿಗೆ ಸಮಾನವಾಗಿ ಹಂಚಬೇಕು ಎಂದು ಆದೇಶಿಸಿದೆ.
ಇದುವರೆಗೂ ಕೋರ್ಟ್ ಇತಿಹಾಸದಲ್ಲೇ ಅಪರಾಧಿಗೆ 50 ವರ್ಷಗೂ ಅಧಿಕ ಜೈಲು ಶಿಕ್ಷೆ ವಿಧಿಸಿದ ಪ್ರಕರಣಗಳಿಲ್ಲ. ಆದರೆ 55 ವರ್ಷ ಜೈಲು ಶಿಕ್ಷೆ ವಿಧಿಸಿರುವುದು ಭಾರತದ ನ್ಯಾಯಾಂಗದ ಇತಿಹಾಸದಲ್ಲೇ ಇದೇ ಮೊದಲು. ಆದರೆ ಈ ಸಂತಸವನ್ನು ಹಂಚಿಕೊಳ್ಳಲು ಪಂಜು ಅವರ ಮಗಳು ಬದುಕಿಲ್ಲ ಎಂದು ಸರ್ಕಾರಿ ವಕೀಲೆ ಪರಿಮಳದೇವಿ ಹೇಳಿದ್ದಾರೆ.