ಹಾಸನ: ಭವಾನಿರೇವಣ್ಣ ಒಂದು ದಿನ ಎಂಎಲ್ಎ ಆಗೇ ಆಗುತ್ತಾರೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಹೆಚ್ಡಿ.ರೇವಣ್ಣ ಹೇಳಿದ್ದು ಈ ಮೂಲಕ ಶಾಸಕ ಪ್ರೀತಂಗೌಡ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಹಾಸನದಲ್ಲಿ ಮತ್ತೆ ಹೆಚ್.ಡಿ.ರೇವಣ್ಣ ಮತ್ತು ಪ್ರೀತಂಗೌಡ ನಡುವೆ ವಾಕ್ಸಮರ ಜೋರಾಗಿದೆ. ನಿನ್ನೆ ಹಾಸನದಲ್ಲಿ ನಡೆದ ಶಾಸಕ ಎನ್.ಮಹೇಶ್ ಅಭಿಮಾನಿಗಳು ಹಾಗೂ ಬೆಂಬಲಿಗರು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೀತಂಗೌಡ ಅವರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬದ ಬಗ್ಗೆ ಟೀಕೆ ಮಾಡಿದ್ದರು. ಒಬ್ಬ ದಲಿತ ಸಮಾಜದ ಬಂಧು ಇಲ್ಲಿಯ ತನಕ ದೊಡ್ಡಗೌಡರ ಮನೆ ಒಳಗೆ ಹೋಗಿರುವ ಒಂದು ನಿದರ್ಶನ ನಮ್ಮ ಕಣ್ಮುಂದೆ ಇಲ್ಲ. ದಲಿತ ಬಂಧುಗಳು ದೊಡ್ಡಗೌಡರ ಮನೆಗೆ ಹೋದ ವೇಳೆ ಅವರು ಮನೆಯಿಂದ ಹೊರಟಿದ್ದಾರೆ. ದಲಿತ ಸಮಾಜದ ಬಂಧುಗಳನ್ನು ನೋಡಿದರೆ ಮತ್ತೆ ಮನೆ ಒಳಗೆ ಹೋಗಿ ಸ್ನಾನ ಮಾಡಿ ಬರುವ ಸಂಸ್ಕøತಿಯನ್ನು ಒಗ್ಗೂಡಿಸಿಕೊಂಡಿದ್ದಾರೆ. ಅಂತಹ ನಾಯಕತ್ವ ಜೆಡಿಎಸ್ ಅವರದ್ದು, ಹಾಸನ ಜಿಲ್ಲೆಯಲ್ಲಿ ದಲಿತ ಸಮಾಜವನ್ನು ಯಾರು ಕೇವಲವಾಗಿ ನೋಡುತ್ತಾರೆ ಅಂದರೆ ಅದು ಜಾತ್ಯಾತೀತ ಜನತಾದಳದವರು ಎಂದು ಶಾಸಕ ಪ್ರೀತಂಗೌಡ ಟೀಕೆ ಮಾಡಿದ್ದರು.
ಹಾಸನ ಕ್ಷೇತ್ರದಿಂದ ನನ್ನ ವಿರುದ್ಧ ಸ್ಪರ್ಧಿಸುವಂತೆ ನಾನೇ ರೇವಣ್ಣ ಹಾಗೂ ಭವಾನಿ ಅಕ್ಕ ಅವರನ್ನು ಒತ್ತಾಯ ಮಾಡುತ್ತಿದ್ದೇನೆ. ರೆಡಿಯಾಗಿ ಬರಬೇಕಿರುವವರು ಅವರು, ನಾನು ರೆಡಿಯಾಗಿ ಫೀಲ್ಡ್ ಅಲ್ಲಿ ಇದ್ದೀನಿ ಎಂದು ಪಂಥಾಹ್ವಾನ ನೀಡಿದ್ದರು. ಇದನ್ನೂ ಓದಿ: ಹಾಸನದಲ್ಲಿ ಜೆಡಿಎಸ್- ಬಿಜೆಪಿ ಎರಡೇ ಆಯ್ಕೆ, ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ: ಪ್ರೀತಂಗೌಡ
ಇದೀಗ ಪ್ರೀತಂಗೌಡ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿರುವ ಹೆಚ್ಡಿ.ರೇವಣ್ಣ, ಅವರು ದೊಡ್ಡವರು. ದಿನ ಅವರ ಮನೆಯಲ್ಲಿ ದಲಿತರಿಗೆ ಊಟ ಹಾಕುತ್ತಿದ್ದಾರೆ. ಮೀಸಲಾತಿ ಇಲ್ಲದಿದ್ದಾಗ ಅಧಿಕಾರ ಕೊಟ್ಟಿರುವ ಪಕ್ಷ ಯಾವುದಾದರೂ ಇದ್ದರೆ ಅದು ದೇವೇಗೌಡರ ಪಕ್ಷ. ಇವರ ಯೋಗ್ಯತೆಗೆ ಅಲ್ಪಸಂಖ್ಯಾತರ ಮೇಲೆ ಆರೋಪ ಮಾಡಲು ಹೊರಟಿದ್ದಾರೆ. ನಮ್ಮ ಮನೆಗೆ ಎಷ್ಟು ಜನ ದಲಿತರನ್ನು ಕರೆದುಕೊಂಡು ಬರುತ್ತಾರೋ ಬರಲಿ ಊಟ ಹಾಕುತ್ತೇನೆ. ನಮ್ಮ ಬಗ್ಗೆ ಮಾತನಾಡದಿದ್ದರೆ ಅವರ ಹೊಟ್ಟೆಪಾಡು ನಡೆಯಲ್ಲ. ಮಾನ ಮಾರ್ಯಾದೆ ಇದ್ದರೆ ಇರುವಷ್ಟು ದಿನ ವ್ಯಾಪಾರ ಮಾಡಿಕೊಂಡು ಮನೆಯಲ್ಲಿ ಇರಲಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರದ ಜನ್ಮವೇ ಭ್ರಷ್ಟಾಚಾರದ್ದು: ಡಿಕೆಶಿ
ಇದೇ ವೇಳೆ, ಹಾಸನಕ್ಕೆ ಭವಾನಿ ರೇವಣ್ಣ ಬರಲಿ ಎಂದು ಆಹ್ವಾನ ನೀಡಿದ್ದ ಪ್ರೀತಂಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ, ಇವನನ್ನು ಕೇಳಿ ಯಾರೂ ಅಭ್ಯರ್ಥಿ ಮಾಡುತ್ತಾರೆ. ಕಾಂಗ್ರೆಸ್ ಮಾಡಿದ ತಪ್ಪಿಗೆ ಬಿಜೆಪಿ ಬಂತು, ಇಲ್ಲ ಅಂದಿದ್ದರೆ ಈ ಗಿರಾಕಿ ಎಲ್ಲಿ ಇರುತ್ತಿರಲಿಲ್ಲ. ಯಡಿಯೂರಪ್ಪನ ಸರ್ಕಾರ ಬಂದಿದ್ದಕ್ಕೆ ಜೀವ ಉಳಿಸಿಕೊಂಡಿದ್ದಾನೆ. ನಾನು ಅವನನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಅವರು ದೊಡ್ಡ ವ್ಯಕ್ತಿ. ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ, ನಾನು ಹೆಬ್ಬೆಟ್ಟು. ಅವರು ಬಾರ್ಅಟ್ಲಾ ಓದಿರುವವರು. ಅವರು ಯಡಿಯೂರಪ್ಪ, ಅವರ ಮಗನ ಹತ್ತಿರ ಓದಿ ಬಂದಿರುವವರು. ಭವಾನಿರೇವಣ್ಣ ಒಂದು ದಿನ ಎಂಎಲ್ಎ ಆಗೇ ಹಾಗುತ್ತಾರೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಐದು ವರ್ಷ, ಹತ್ತು ವರ್ಷ ಆಗುತ್ತೋ ಹೊಳೆನರಸೀಪುರದಲ್ಲಿ ಭವಾನಿರೇವಣ್ಣಗೆ ಟಿಕೆಟ್ ಕೊಟ್ಟರೆ ನಾನು ಕೆಲಸ ಮಾಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.