ಹಾಸನ: ಪೊಲೀಸರ ತನಿಖೆ ನಂತರ ಶಾಸಕ ಎಸ್ಆರ್ ವಿಶ್ವನಾಥ್ ಕೊಲೆ ಸಂಚು ಪ್ರಕರಣದ ಸತ್ಯಾಸತ್ಯತೆ ಹೊರಬರಲಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಗೋಪಾಲಕೃಷ್ಣ ಅವರು ವೀಡಿಯೋ ಮತ್ತು ಆಡಿಯೋ ರಿಲೀಸ್ ಮಾಡಿದ್ದೇವೆ ಅಂತಿದ್ದಾರೆ. ಈಗಿರುವುದು ಫೇಕ್ ವೀಡಿಯೋ ಎಂದು ಸಿಸಿಬಿಗೆ ಮನವಿ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಯಾರೂ ಬೇಕಾದರೂ ಯಾವ ಪಕ್ಷದಲ್ಲಾದರೂ ಇರಲಿ ರಾಜಕೀಯವಾಗಿ ಹೋರಾಟ ಮಾಡಬೇಕು. ಅದನ್ನು ಬಿಟ್ಟು ರಾಜಕಾರಣದಲ್ಲಿ ವೈಯಕ್ತಿಕ ದ್ವೇಷ ಮಾಡುವುದು ಒಳ್ಳೆಯದಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುದೇ ಪಕ್ಷದಲ್ಲಿದ್ದಲ್ಲಿದ್ದರೂ ಈ ರೀತಿ ಮಾಡುವುದು ಸರಿಯಾಗಿಲ್ಲ ಎಂದರು.
ನಮಗೆ ಕೊಟ್ಟಿರುವ ಮಾಹಿತಿ ಪ್ರಕಾರ, ಫೇಕ್ ವೀಡಿಯೋ ಎಂದು ಹೇಳಿದ್ದಾರೆ. ಪೊಲೀಸರು ಅದಕ್ಕೆ ಬೇಕಾದ ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಕುರಿತಾಗಿ ಗೋಪಾಲಕೃಷ್ಣ ಅವರು ಈಗಾಗಲೆ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಕೊಲೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬೊಬ್ಬರು ಕೂಡ ಒಂದೊಂದು ಪಕ್ಷದಲ್ಲಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷ ಯಾವತ್ತೂ ಇಂಥ ಕೆಲಸ ಬೆಂಬಲಿಸಲ್ಲ ಎಂದು ತಿಳಿಸಿದರು.
ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ: ಹಾಸನ ಜಿಲ್ಲೆಯಲ್ಲಿ ಭಯದ ವಾತಾವರಣವನ್ನು ಜನತಾದಳದ ನಾಯಕರು ನಿರ್ಮಾಣ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಕ್ತ ಚುನಾವಣೆಗಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇನೆ. ಮತದಾನದ ಹಕ್ಕಿರುವ ಗ್ರಾಪಂ ಸದಸ್ಯರಿಗೆ ತಮ್ಮ ಏಜೆಂಟ್ಗೆ ತೋರಿಸಿ ಮತ ಹಾಕುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಜೆಡಿಎಸ್ ನಾಯಕರ ವಿರುದ್ಧ ಸಂಸದ ಡಿಕೆ.ಸುರೇಶ್ ಆರೋಪ ಮಾಡಿದರು.
ಚುನಾವಣೆ ನೀತಿ ಸಂಹಿತೆ ಇದ್ದರೂ ಸರ್ಕಾರಿ ವಾಹನ ಹಿಂಪಡೆದಿಲ್ಲ. ಲೋಕಸಭಾ ಕಚೇರಿ ಚುನಾವಣಾ ಕಾರ್ಯತಂತ್ರದ ಕೇಂದ್ರ ಸ್ಥಾನವಾಗಿದೆ. ಜಿಲ್ಲಾಡಳಿತ ಜೆಡಿಎಸ್ ಜೊತೆ ಶಾಮೀಲಾಗಿದೆ ಎಂದು ಕಾಣುತ್ತದೆ. ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರ ಸಲ್ಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ಗೆ 3ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ
ದೇವೇಗೌಡರ ಪ್ರಧಾನಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಂಸದ, ಜೆಡಿಎಸ್ ಮತ್ತು ಬಿಜೆಪಿ ಯಾವುದೇ ಕ್ಷಣದಲ್ಲಿ ಬೇಕಾದರೂ ಒಂದಾಗ್ತಾರೆ ಎಂಬುದು ಗೊತ್ತಿದೆ. ಜೆಡಿಎಸ್ನವರು ಬಿಜೆಪಿ ಜೊತೆಯಲ್ಲಿ ಅಥವಾ ಯಾರ ಜೊತೆ ಬೇಕಾದರೂ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಅಧಿಕಾರಕ್ಕೋಸ್ಕರ ಹಾಗೂ ಸ್ಥಾನ ಉಳಿಯಲು ಅವರು ಏನು ಬೇಕಾದರೂ ಮಾಡುತ್ತಾರೆ. ಅವರು ಅದನ್ನು ಮೊದಲಿಂದಲೂ ಮಾಡಿಕೊಂಡು ಬಂದಿದ್ದಾರೆ ಮುಂದೆಯೂ ಈ ರೀತಿಯಾಗೆ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಎ.ಮಂಜು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಎ.ಮಂಜು ಅವರು ಈಗಾಗಲೇ ಬಿಜೆಪಿಯ ಸಕ್ರಿಯ ನಾಯಕರಾಗಿದ್ದಾರೆ. ಅವರು ಏನು ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನುವುದರ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದರು. ಇದನ್ನೂ ಓದಿ: ನನಗೆ ಮತ ಹಾಕದಂತೆ ಜೆಡಿಎಸ್ ಮುಖಂಡರು ಬೆದರಿಕೆ ಹಾಕ್ತಿದ್ದಾರೆ: ಎಂ.ಶಂಕರ್ ಆರೋಪ
ಕೊಡಗಿನಲ್ಲಿ ನಮ್ಮ ಪಕ್ಷದಿಂದ ಸ್ಪರ್ಧಿಸಿರುವ ಮಂಥರ್ ಕಾಂಗ್ರೆಸ್ಗಾಗಿ ಅನೇಕ ಕೆಲಸ ಮಾಡಿದ್ದಾರೆ. ಪಕ್ಷ ಅವರನ್ನು ಗುರುತಿಸಿ ಟಿಕೆಟ್ ನೀಡಿದೆ. ಮಂಥರ್ ಪರ ಎ.ಮಂಜು ಅವರು ಹೋಗಿ ಚುನಾವಣೆ ಪ್ರಚಾರ ಮಾಡೋದು ಅವರ ವೈಯಕ್ತಿಕ ವಿಷಯವಾಗಿದೆ. ಪಕ್ಷ ಅದನ್ನು ಸಮರ್ಥನೆ ಮಾಡಿಕೊಳ್ಳಲ್ಲ. ನಾನು ಶಾಸಕರಾದ ಶಿವಲಿಂಗೇಗೌಡ, ಪ್ರೀತಂಗೌಡ, ಬಾಲಕೃಷ್ಣ, ಕುಮಾರಸ್ವಾಮಿ ಸೇರಿದಂತೆ ಎಲ್ಲ ನಾಯಕರ ಬೆಂಬಲ ಕೋರುತ್ತೇನೆ ಎಂದ ಅವರು, ಜಿಲ್ಲೆಯ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿ ಶಂಕರ್ಗೆ ಮತ ನೀಡಿ ಅಂತ ಮನವಿ ಮಾಡಿದರು.