ಚಂಡೀಗಢ: ದೀಪಾವಳಿ ಹಿನ್ನೆಲೆಯಲ್ಲಿ ದೆಹಲಿಗೆ ಸಮೀಪವಿರುವ ತನ್ನ 14 ಜಿಲ್ಲೆಗಳಲ್ಲಿ ಪಟಾಕಿ ಮಾರಾಟ ಹಾಗೂ ಪಟಾಕಿ ಸಿಡಿಸುವುದನ್ನು ನಿಷೇಧಿಸಿ ಹರಿಯಾಣ ಸರ್ಕಾರ ಆದೇಶ ಹೊರಡಿಸಿದೆ. ಆನ್ಲೈನ್ ಶಾಪಿಂಗ್ನಲ್ಲೂ ಪಟಾಕಿ ಮಾರಾಟ ಮಾಡುವಂತಿಲ್ಲ ಎಂದು ಸ್ಪಷ್ಟ ಸೂಚನೆ ನೀಡಿದೆ.
ಪಟಾಕಿ ಸಿಡಿಸುವುದರಿಂದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಸಮಸ್ಯೆ ಆಗಲಿದೆ. ಕೋವಿಡ್-19ಕ್ಕೆ ಒಳಗಾಗಿ ಹೋಂ ಐಸೊಲೇಷನ್ ಆಗಿರುವವರಿಗೆ ಇದರಿಂದ ಮತ್ತಷ್ಟು ಅಪಾಯ ಎದುರಾಗಬಹುದು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್ನ ತೀರ್ಪುಗಳನ್ನು ಉಲ್ಲೇಖಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉಲ್ಲೇಖಿಸಿದೆ. ಇದನ್ನೂ ಓದಿ: ಮೋದಿ ಪ್ರಧಾನಿ ಆಗಲು ಕಾಂಗ್ರೆಸ್ ಕಾರಣ: ಸಿದ್ದರಾಮಯ್ಯ
ಭಿವಾನಿ, ಛಾರ್ಖಿ ದಾದ್ರಿ, ಫರೀದಾಬಾದ್, ಗುರುಗ್ರಾಮ, ಝಜ್ಜರ್, ಜಿಂದ್, ಕರ್ನಾಲ್, ಮಹೇಂದ್ರಘರ್, ನಹ್, ಪಲ್ವಾಲ್, ಪಾಣಿಪತ್, ರೆವಾರಿ, ರೋಹ್ಟಕ್, ಸೋನಿಪತ್ ಜಿಲ್ಲೆಗಳಲ್ಲಿ ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ನಿಷೇಧಿಸಿದೆ.
ಉಳಿದಂತೆ ನಗರ ಹಾಗೂ ಪಟ್ಟಣಗಳಿಗೂ ಈ ಆದೇಶ ಅನ್ವಯವಾಗಲಿದೆ. ವಾಯು ಗುಣಮಟ್ಟವನ್ನು ಆಧರಿಸಿ ಪಟಾಕಿ ಸಿಡಿಸಲು ಅನುಮತಿ ನೀಡಲಾಗಿದೆ. ಹಸಿರು ಪಟಾಕಿ ಸಿಡಿಸಲು ಯಾವುದೇ ನಿರ್ಬಂಧವಿಲ್ಲ. ಇದನ್ನೂ ಓದಿ: ನೀರಜ್ ಚೋಪ್ರಾಗೆ XUV 700 ಕಾರ್ ಗಿಫ್ಟ್ ನೀಡಿದ ಮಹೀಂದ್ರಾ
ಮದುವೆ ಮತ್ತು ಇನ್ನಿತರ ಸಮಾರಂಭಗಳಲ್ಲಿ ಹಸಿರು ಪಟಾಕಿ ಮಾತ್ರ ಸಿಡಿಸಬಹುದು. ಇತರೆ ಹಬ್ಬಗಳಲ್ಲಿ ಪ್ರಕಟಣೆಯಲ್ಲಿ ಸೂಚಿಸಿರುವ ಸಮಯದಲ್ಲಿ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.