ಬೆಂಗಳೂರು: ಮಧ್ಯರಾತ್ರಿ 12 ಗಂಟೆಯ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಝೀರೋ ಟ್ರಾಫಿಕ್ನಲ್ಲಿ ಸಂಚರಿಸಿದ್ದಾರೆ.
ಬುಧವಾರ ಸಿಎಂ ಹಾನಗಲ್ ವಿಧಾನಸಭಾ ಉಪಚುನಾವಣೆಯ ಪ್ರಚಾರಕ್ಕೆ ತೆರಳಿದ್ದರು. ಪ್ರಚಾರ ಮುಗಿಸಿ ರಾತ್ರಿ ಹುಬ್ಬಳ್ಳಿಗೆ ಝೀರೋ ಟ್ರಾಫಿಕ್ನಲ್ಲಿ ಮರಳಿದ್ದಾರೆ.
ಶಿಗ್ಗಾಂವಿಯ ತಡಸ ಕ್ರಾಸ್ನಿಂದ ಹುಬ್ಬಳ್ಳಿವರೆಗೂ ಬೊಮ್ಮಾಯಿ ಅವರಿಗೆ ಝೀರೋ ಟ್ರಾಫಿಕ್ ನೀಡಲಾಗಿತ್ತು. ಬೇರೆ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲು ಪೊಲೀಸರು ಅವಕಾಶ ನೀಡಿರಲಿಲ್ಲ. ರಸ್ತೆಗೆ ಇಳಿಯಲು ಅವಕಾಶ ನೀಡದ ಕಾರಣ ಸರ್ವಿಸ್ ರಸ್ತೆಯಲ್ಲೇ ಇತರೇ ವಾಹನಗಳು ನಿಂತಿದ್ದವು. ಪೊಲೀಸರು ತಡೆದ ಪರಿಣಾಮ ಸುಮಾರು 20 ನಿಮಿಷದಿಂದ ಅರ್ಧಗಂಟೆಯವರೆಗೂ ವಾಹನಗಳು ಸರ್ವಿಸ್ ರಸ್ತೆಯಲ್ಲೇ ನಿಂತಿದ್ದವು. ಇದನ್ನೂ ಓದಿ: ಮರದ ಜೊತೆ ನಟಿ ನಯನತಾರಾ ಮದುವೆ
ಮುಖ್ಯಮಂತ್ರಿಗಳು ತಮ್ಮ ಸಂಚಾರಕ್ಕೆ ಝೀರೋ ಟ್ರಾಫಿಕ್ ಬಳಸಬಹುದು. ಇದು ಅವರಿಗೆ ನೀಡಲಾಗಿರುವ ಪರಮಾಧಿಕಾರ. ಆದರೆ ಮಧ್ಯರಾತ್ರಿ 25 ಕಿಲೋಮೀಟರ್ ದೂರ ಕ್ರಮಿಸಲು ಝೀರೋ ಟ್ರಾಫಿಕ್ ಬೇಕಿತ್ತಾ? ಅದು ಹೈವೆಯಲ್ಲಿ ಬೇಕಿತ್ತಾ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ನಾನು ಸಿಎಂ ಅಲ್ಲ. ಕಾಮನ್ ಮ್ಯಾನ್. ಸರಳ ರಾಜಕಾರಣಿ ಎಂದು ಬಸವರಾಜ ಬೊಮ್ಮಾಯಿ ಅವರೇ ಹಲವು ವೇದಿಕೆಯಲ್ಲಿ ಹೇಳಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಹೀಗಿರುವಾಗ ಮಧ್ಯರಾತ್ರಿ ವಾಹನಗಳ ಸಂಚಾರ ಕಡಿಮೆ ಇರುತ್ತದೆ. ಈ ಸಮಯದಲ್ಲೂ ಝೀರೋ ಟ್ರಾಫಿಕ್ ಬೇಕಿತ್ತೇ ಎನ್ನುವುದು ಕಾಮನ್ ಮ್ಯಾನ್ ಪ್ರಶ್ನೆ.