ಮಂಡ್ಯ: ಊಟದ ವಿಚಾರಕ್ಕೆ ಜಗಳ ತೆಗೆದು 12 ಜನರ ಗುಂಪೊಂದು ಡಾಬಾಗೆ ನುಗ್ಗಿ ದಾಂಧಲೆ ನಡೆಸಿದಲ್ಲದೇ ಡಾಬಾ ಮಾಲೀಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಎ ರಾಮನಹಳ್ಳಿ ಬಳಿ ನಡೆದಿದೆ.
ಲಕ್ಷ್ಮಿ ಡಾಬಾದಲ್ಲೇ ದಾಂಧಲೆ ನಡೆದಿದ್ದು, ಮಾಲೀಕ ದೇವರಾಜು ಹಾಗೂ ಅವರ ಸಹೋದರರ ಮೇಲೆ ಮನಬಂದಂತೆ ಥಳಿಸಿರುವ ದಾಳಿಕೋರರು ಅಲ್ಲಿಂದ ಪರಾರಿಯಾಗಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಲ್ಲೆಯ ದೃಶ್ಯ ಬೆಚ್ಚಿ ಬೀಳಿಸುವಂತಿದೆ.
ಇದೇ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ನಾಗಮಂಗಲ ಪಟ್ಟಣದ ಯುವಕರ ತಂಡವೊಂದು, ನಾಗಮಂಗಲ ಪಟ್ಟಣದ ಸಮೀಪವಿರುವ ಶ್ರೀರಾಮನಹಳ್ಳಿ ಬಳಿಯಿರುವ ಡಾಬಾಗೆ ಬಂದು ಊಟ ಕೇಳಿದ್ದಾರೆ. ಅದಾಗಲೇ ಟೈಂ ಆಗಿದ್ದರಿಂದ ಡಾಬಾದ ಮಾಲೀಕ ದೇವರಾಜು ಅವರು ಇಲ್ಲಿ ಊಟ ಖಾಲಿಯಾಗಿದೆ ಎಂದು ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಆ ಯುವಕರು ಡಾಬಾ ಮಾಲೀಕ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ, ದೇವರಾಜು ಅವರ ಮೇಲೆ ರೇಗಾಡಿಕೊಂಡು ಅಲ್ಲಿಂದ ತೆರಳಿದ್ದಾರೆ.
ನಾವು ಬಂದು ಊಟ ಕೇಳಿದರೂ ಕೊಡಲಿಲ್ಲ ಎಂದುಕೊಂಡ ಯುವಕರ ಗುಂಪು ಮತ್ತೆ ಸಂಜೆ ಏಕಾಏಕಿ ಡಾಬಾದ ಬಳಿ ಬಂದು ಗಲಾಟೆ ಮಾಡಲಾರಂಭಿಸಿದ್ದಾರೆ. ಅಲ್ಲಿಯೇ ಕೆಲಸ ಮಾಡುತ್ತಿದ್ದ ಡಾಬಾದ ಮಾಲೀಕರಾದ ದೇವರಾಜು ಹಾಗೂ ಅವರ ಸಹೋದರ ರೇವಣ್ಣರ ಮೇಲೆ ಮಾರಕಾಸ್ತ್ರಗಳು ಮತ್ತು ಡಾಬಾದಲ್ಲಿ ಸಿಗುವ ಪಾತ್ರಗಳನ್ನೇ ತೆಗೆದುಕೊಂಡು ಮನಸ್ಸೋ ಇಚ್ಚೆ ದಾಳಿ ನಡೆಸಿ ತಾವು ಬಂದಿದ್ದ ಬೈಕ್ ನಲ್ಲೇ ಅಲ್ಲಿಂದ ತೆರಳಿದ್ದಾರೆ.
ಸಂಜೆ 6.20 ರ ವೇಳೆಗೆ ಬೈಕಿನಲ್ಲಿ ಬಂದ ಯುವಕರ ಗುಂಪು ಮೊದಲು ಡಾಬಾದ ಒಳಗೆ ಪ್ರವೇಶಿಸಿದ್ದಾರೆ. ಒಳ ಹೋದವರೇ ಕೈಗೆ ಸಿಕ್ಕ ಅಡುಗೆ ಮಾಡುವ ವಸ್ತುಗಳನ್ನ ತೆಗೆದುಕೊಂಡು ದೇವರಾಜು ಹಾಗೂ ರೇವಣ್ಣರ ಮೇಲೆ ಹಲ್ಲೆ ನಡೆಸಿದೆ. ಅಷ್ಟು ಸಾಲದು ಎಂಬಂತೆ ಇಬ್ಬರನ್ನೂ ಡಾಬಾದ ಹೊರಗೆ ಎಳೆದುಕೊಂಡು ಬಂದು ಅಲ್ಲಿಯೂ ಕಾಲಿನಿಂದ ಒದಿದ್ದಾತ್ತಾರೆ. ಸೌಟ್ ನಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಇದಿಷ್ಟೂ ಚಿತ್ರಣ ಡಾಬಾದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಗಲಾಟೆ ನಡೆಯುವ ಕೆಲವೇ ನಿಮಿಷದ ಮುಂಚಿತವಾಗಿ ಶಾಸಕ ಎನ್ ಚಲುವರಾಯಸ್ವಾಮಿ ಅವರು ಡಾಬಾದ ಬಳಿಗೆ ಬಂದು ಹೋಗಿದ್ದರು. ಅವರ ಕಾರು ಅಲ್ಲಿಂದ ಹೋಗುತ್ತಿದ್ದಂತೆ ಯುವಕರು ಆಗಮಿಸಿ ಡಾಬಾದ ಮೇಲೆ ದಾಳಿ ನಡೆಸಿದ್ದು, ನಂತರ ಅವರ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಇದೊಂದು ರಾಜಕೀಯ ದ್ವೇಷಕ್ಕೆ ನಡೆದ ಹಲ್ಲೆ ಎಂದೇ ಹೇಳಲಾಗುತ್ತಿದೆ. ಆದರೆ, ಹಲ್ಲೆಗೊಳಗಾದವರೇ ಇದು ರಾಜಕೀಯ ದ್ವೇಷದಿಂದ ನಡೆದಿಲ್ಲ ಎಂದು ಸ್ಪಷ್ಟನೆ ನೀಡುವ ಮೂಲಕ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದ್ದಾರೆ.