ಮಂಡ್ಯ/ಕೋಲಾರ: ಶ್ರೀವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಇಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಶ್ರೀಚಾಮುಂಡೇಶ್ವರಿ ತಾಯಿ ದೇವಾಲಯವನ್ನು ವಿಶೇಷವಾಗಿ ನೋಟುಗಳಿಂದ ಸಿಂಗರಿಸಿ ಪೂಜೆ ನೆರವೇರಿಸಲಾಯಿತು. ಇತ್ತ ಕೋಲಾರದಲ್ಲಿ ನೆರೆ ಸಂತ್ರಸ್ತರ ಕಷ್ಟಗಳು ನಿವಾರಣೆಯಾಗಲೆಂದು ವಿಶೇಷ ಪೂಜೆ ನಡೆಸಲಾಯಿತು.
ಅರ್ಚಕ ಲಕ್ಷ್ಮೀಶ್ ಅವರು, ಭಕ್ತರು ಸಿಂಗಾರಕ್ಕೆಂದು ನೀಡಲಾಗಿದ್ದ 5 ಲಕ್ಷ ರೂ.ಗಳನ್ನು ಬಗೆ ಬಗೆಯಾಗಿ ಅಲಂಕರಿಸಿ ವಿಶೇಷ ರೀತಿಯಲ್ಲಿ ದೇವಿಯನ್ನು ಆರಾಧಿಸಿದರು. 2,000, 500, 200, 100, 50, 20, 10 ಹಾಗೂ 5 ರೂ.ಗಳ ನೋಟುಗಳ ಸಿಂಗಾರ ಭಕ್ತರ ಮನಪುಳಕಗೊಳ್ಳುವಂತೆ ಮಾಡಿತು. ಈ ಅಪರೂಪದ ಚಿತ್ರಣವನ್ನು ಕಣ್ತುಂಬಿಕೊಂಡ ಭಕ್ತರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ತಮ್ಮ ಇಷ್ಟಾರ್ಥ ಈಡೇರಿಸುವಂತೆ ಬೇಡಿಕೊಂಡರು.
ಇತ್ತ ಕೋಲಾರದಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಬೆಳಗ್ಗಿನಿಂದಲೇ ಹೆಂಗಳೆಯರು ಮನೆಗಳಲ್ಲಿ ವರ ಕೊಡೋ ಲಕ್ಷ್ಮಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿ ಸಂಭ್ರಮಿಸುತ್ತಿದ್ದಾರೆ. ಕೆಲವರು ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆಗಳನ್ನು ಸಲ್ಲಿಸಿ ಲಕ್ಷ್ಮಿ ಕೃಪಕಟಾಕ್ಷೆಗೆ ಪಾತ್ರರಾಗುತ್ತಿದ್ದಾರೆ. ಹಬ್ಬದ ಪ್ರಯುಕ್ತ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಪಿಚ್ಚಗುಂಟ್ಲಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಆದಿಪರಾಶಕ್ತಿಯ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಅಲಂಕಾರವನ್ನು ಹಮ್ಮಿಕೊಳ್ಳಲಾಗಿದೆ. ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬ- ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ
ಕಳೆದ 21 ವರ್ಷಗಳಿಂದ ಈ ದೇವಾಲಯದಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆಂದು 108 ಬಗೆಯ ಸಿಹಿ ತಿಂಡಿಗಳನ್ನು ಮಾಡಿ ಲಕ್ಷ್ಮಿ ಪೂಜೆಯನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಈ ವರ್ಷ ವಿಶೇಷವಾಗಿ ನೆರೆ ಸಂತ್ರಸ್ತರ ಕಷ್ಟಗಳು ನಿವಾರಣೆಯಾಗಲಿ ಎಂದು ವಿವಿಧ ಬಗೆಯ ಸಿಹಿ ಹಾಗೂ ಖಾರದ ನೈವೇಧ್ಯ ಸಿದ್ಧಪಡಿಸಿ ದೇವರ ಪೂಜೆ ಸಲ್ಲಿಸಲಾಗುತ್ತಿದೆ.
ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ದೇವರ ದರ್ಶನಕ್ಕೆ ಬರುವ ನೂರಾರು ಭಕ್ತಾಧಿಗಳಿಗೆ ದೇವಾಲಯದ ವತಿಯಿಂದ ವಿಶೇಷವಾಗಿ ಅನ್ನದಾನವನ್ನು ಹಮ್ಮಿಕೊಳ್ಳಲಾಗಿದೆ. ದೇವರಿಗೆ ಬೇಕಾದ ಸಿಹಿ ತಿಂಡಿಗಳನ್ನು ಮಾಡೋದ್ರಿಂದ ವರಮಹಾಲಕ್ಷ್ಮಿ ಜನರಿಗೆ ತಮ್ಮೆಲ್ಲ ಇಷ್ಟಾರ್ಥಗಳನ್ನು ಈಡೇರಿಸಲಿದೆ ಎನ್ನುವ ನಂಬಿಕೆ ಇಲ್ಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv