ಚೆನ್ನೈ: ಇನ್ಮುಂದೆ ನಾಯಿ ಸಾಕಬೇಡ ಎಂದಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.
ಕವಿತಾ(24) ಆತ್ಮಹತ್ಯೆ ಮಾಡಿಕೊಂಡ ಯುವತಿ. ಕವಿತಾ ಪ್ರೈವೇಟ್ ಸೆಕ್ಟರ್ ನಲ್ಲಿ ಕೆಲಸ ಮಾಡುತ್ತಿದ್ದಳು. ಕಳೆದ ಎರಡು ವರ್ಷಗಳಿಂದ ಕವಿತಾ, ಸೀಸರ್ ಎಂಬ ನಾಯಿಯನ್ನು ಸಾಕುತ್ತಿದ್ದಳು. ಆದರೆ ನಾಯಿ ಪ್ರತಿದಿನ ನಿರಂತರವಾಗಿ ಬೊಗಳುತ್ತಿದ್ದ ಕಾರಣ ಅಕ್ಕಪಕ್ಕದ ಮನೆಯವರಿಗೆ ಕಿರಿಕಿರಿ ಆಗುತ್ತಿತ್ತು. ಹಾಗಾಗಿ ಆಕೆಯ ತಂದೆ ಇನ್ಮುಂದೆ ನಾಯಿಯನ್ನು ಸಾಕಬೇಡ ಎಂದಿದ್ದರು. ತಂದೆಯ ಮಾತಿಗೆ ಬೆಲೆ ಕೊಡದೆ ಕವಿತಾ ನಾಯಿ ಸಾಕುವುದನ್ನು ಮುಂದುವರಿಸಿದ್ದಳು.
ಬುಧವಾರ ರಾತ್ರಿ ಮಿಂಚು-ಗುಡುಗು ಸಹಿತ ಜೋರಾಗಿ ಮಳೆ ಬರುತ್ತಿದ್ದ ಕಾರಣ ನಾಯಿ ಭಯದಿಂದ ಜೋರಾಗಿ ಬೊಗಳಲು ಶುರು ಮಾಡಿತ್ತು. ನಾಯಿ ಬೊಗಳುವುದನ್ನು ಕೇಳಲಾಗದೆ ಅಕ್ಕಪಕ್ಕದ ಮನೆಯವರು ಕವಿತಾ ತಂದೆಗೆ ಈ ಬಗ್ಗೆ ದೂರಿದ್ದರು. ಮರುದಿನ ತಂದೆ ಕವಿತಾಳಿಗೆ ನಿಂದಿಸಿ ನಾಯಿಯನ್ನು ಬೇರೆ ಏರಿಯಾದಲ್ಲಿ ಬಿಟ್ಟು ಬರುವಂತೆ ಹೇಳಿದ್ದರು. ತಂದೆ ಬೈದಿದ್ದರಿಂದ ಹಾಗೂ ನಾಯಿಯಿಂದ ದೂರವಿರಲು ಆಗದೆ ಕವಿತಾ ಗುರುವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕವಿತಾ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಡೆತ್ನೋಟ್ ಪತ್ತೆಯಾಗಿದೆ. ಡೆತ್ನೋಟ್ನಲ್ಲಿ ಕವಿತಾ, ನಾನು ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕ್ಷಮೆ ಕೇಳುತ್ತೇನೆ. ನನ್ನ ನಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ಹಾಗೂ ಅದಕ್ಕೆ ನೆಮ್ಮದಿಯಿಂದ ಬದುಕಲು ಬಿಡಿ ಎಂದು ಬರೆದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.