ತುಮಕೂರು: ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿ ನಿಂತಿದ್ದ 93 ಕಸ ಸಾಗಿಸುವ ಆಟೋಗಳಿಗೆ ಕೊನೆಗೂ ಮುಕ್ತಿಭಾಗ್ಯ ಸಿಕ್ಕಿದೆ. ಪಬ್ಲಿಕ್ ಟಿ.ವಿ ವರದಿಯಿಂದ ಎಚ್ಚೆತ್ತುಕೊಂಡ ಪಾಲಿಕೆ ಆಟೋಗಳನ್ನು ರಸ್ತೆಗಿಳಿಸಿದೆ.
ಹೌದು. ತುಮಕೂರು ಮಹಾನಗರ ಪಾಲಿಕೆ ಖರೀದಿ ಮಾಡಿರುವ ಕಸ ಸಾಗಿಸೋ ಟಾಟಾ ಏಸ್ ಆಟೋ (Auto) ಗಳು ಸುಮಾರು ಮೂರು ತಿಂಗಳಿನಿಂದ ಮಳೆ ನಿಂತ್ತಿದ್ದವು. ಸುಮಾರು 6 ಕೋಟಿರೂ. ವೆಚ್ಚದಲ್ಲಿ ಖರೀಸಿದ್ದ ಟಾಟಾ ಏಸ್ಗಳು ತುಕ್ಕು ಹಿಡಿಯುತ್ತಿದ್ದವು. ಇದೇ ಪರಿಸ್ಥಿತಿಯಲ್ಲಿ ಇದ್ದರೆ ಕೆಲವೇ ದಿನಗಳಲ್ಲಿ ಗುಜರಿಗೆ ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಪಾಲಿಕೆ ಸದಸ್ಯರು ಆತಂಕ ವ್ಯಕ್ತಪಡಿಸಿದ್ರು. ಪಾಲಿಕೆಯ ಈ ದಿವ್ಯ ನಿರ್ಲಕ್ಷ್ಯದ ಬಗ್ಗೆ ಪಬ್ಲಿಕ್ ಟಿ.ವಿ. ವಿಸ್ತ್ರತ ವರದಿ ಮಾಡಿತ್ತು.
ಪಬ್ಲಿಕ್ ಟಿ.ವಿ.ಯ ವರದಿಯಿಂದ ಕಣ್ಣು ತೆರೆದ ಪಾಲಿಕೆ ಅಧಿಕಾರಿಗಳು ಆಟೋ ರೋಡಿಗಿಳಿಯುವ ವ್ಯವಸ್ಥೆ ಮಾಡಿದ್ದಾರೆ. ಎಲ್ಲಾ ಆಟೋಗಳನ್ನು ಅಧಿಕೃತವಾಗಿ ವಾರ್ಡ್ಗೆ ಹಂಚಿಕೆ ಮಾಡಲಾಗಿದೆ. ನಗರ ಶಾಸಕ ಜಿ.ಬಿ ಜ್ಯೋತಿಗಣೇಶ್, ಪಾಲಿಕೆ ಆಯುಕ್ತೆ ರೇಣುಕಾ ಉಪಸ್ಥಿತಿಯಲ್ಲಿ ಪಾಲಿಕೆಯ ವಾರ್ಡ್ ಚಾಲಕರಿಗೆ ಕೀ ಕೊಟ್ಟು ಆಟೋಗೆ ಚಾಲನೆ ನೀಡಲಾಗಿದ್ದು, ಅಕ್ಟೋಬರ್ 1 ರಿಂದ ಅಧಿಕೃತವಾಗಿ ಕಸ ಸಂಗ್ರಹಿಸುವ ಕೆಲಸ ಮಾಡಲಿವೆ. ಇದನ್ನೂ ಓದಿ: ಯುವ ದಸರಾದಲ್ಲಿ ಅಪ್ಪು ನಮನ- ಗಂಧದ ಗುಡಿ ಟೀಸರ್ ನೋಡಿ ಕಣ್ಣೀರಿಟ್ಟ ಅಶ್ವಿನಿ
ಸದ್ಯ ತಟಸ್ಥವಾಗಿ ನಿಂತಿದ್ದ ಆಟೋಗಳಿಗೆ ರೋಡಿಗಿಳಿಯುವ ಭಾಗ್ಯ ಸಿಕ್ಕಿದೆ. ಆದರೆ ಮೂರು ತಿಂಗಳು ಮಳೆಯಲ್ಲಿ ನಿಂತ ಆಟೋದ ಗುಣಮಟ್ಟ ಅಸಲಿ ಬಣ್ಣ ಹೇಗಿದೆ ಅನ್ನೋದು ಕೆಲವು ದಿನ ಕಾದುನೋಡಬೇಕಿದೆ.