ಗದಗ: ಜಲಪ್ರಳಯದ ಊರಲ್ಲಿ ಜಲಕ್ಷಾಮ ಎದುರಾಗಿದ್ದು, ಕುಡಿಯುವ ನೀರಿಗಾಗಿ ಖಾಲಿ ಕೊಡಗಲ್ಲಿ ಜನರು ಹೊಡೆದಾಡುತ್ತಿರುವ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರ ಗ್ರಾಮದಲ್ಲಿ ನಡೆದಿದೆ.
ಪ್ರವಾಹ ಬಂದು ಹೋದ ಮೇಲೆ ಸಂತ್ರಸ್ತರು ಕುಡಿಯುವ ಹನಿ ನೀರಿಗೂ ಪರದಾಡುತ್ತಿದ್ದಾರೆ. ಕುಡಿಯಲು, ನೀರು ನುಗ್ಗಿ ಕೆಸರಾಗಿರುವ ಮನೆ ತೊಳೆಯಲು, ಜಾನುವಾರುಗಳಿಗೂ ಕುಡಿಯುವ ನೀರಿಲ್ಲದೇ ಮೂಕ ರೋಧನೆ ಕೇಳತೀರದಾಗಿದೆ.
ಪ್ರವಾಹ ತಗ್ಗಿದ ಬಳಿಕ ತಾಲೂಕು ಆಡಳಿತ ನಾಪತ್ತೆಯಾಗಿದೆ. ನೀರಲ್ಲಿ ಮುಳುಗಿದ ಜನರಿಗೆ ಈಗ ಕುಡಿಯೋಕೆ ನೀರಿಲ್ಲ. ಸಂಘ ಸಂಸ್ಥೆಯಿಂದ ಪೂರೈಸಿದ ಟ್ಯಾಂಕರ್ ನೀರಿಗಾಗಿ ಕೊಡಗಳನ್ನು ಹಿಡಿದು ಸಂತ್ರಸ್ತರು ಹೊಡೆದಾಡಿಕೊಳ್ಳುತ್ತಿದ್ದಾರೆ.
ಟ್ಯಾಂಕರ್ ಗಳಿಂದ ನೀರು ಪೂರೈಸದ ತಾಲೂಕು ಆಡಳಿತ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಂತ್ರಸ್ತರು ಬೇಸರಗೊಂಡು ಕಣ್ಣಿರಲ್ಲಿ ಕೈತೊಳೆಯುತ್ತಿದ್ದಾರೆ. ಪ್ರವಾಹ ನಿಂತ ಮೇಲೆ ಸಂತ್ರಸ್ತರ ಗೋಳು ಕೇಳೊರಾರು ಎಂಬ ಪ್ರಶ್ನೆ ನೆರೆಹಾವಳಿ ಗ್ರಾಮಗಳಲ್ಲಿ ಎದುರಾಗಿದೆ.