ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ (RCB) ಪಂದ್ಯ ನಮ್ಮ ಕಡೆಯಿಂದ ಕ್ಲಿಯರೆನ್ಸ್ ಸಿಗಬೇಕಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G.Parameshwara) ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಜಸ್ಟೀಸ್ ಕುನ್ಹಾ ಅವರ ವರದಿಯ ಶಿಫಾರಸು ಪಾಲಿಸಬೇಕು ಅಂತ ಹೇಳಿದ್ದೀವಿ. ಸರ್ಕಾರದಿಂದ ಜಿಬಿಎ ಹಾಗೂ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸಮಿತಿ ಕೂಡಾ ರಚಿಸಲಾಗಿತ್ತು. ಸಮಿತಿಯು ಕೂಡಾ ಒಂದಷ್ಟು ಶಿಫಾರಸು ಮಾಡಿದೆ. ಐಪಿಎಲ್ ಮ್ಯಾಚ್ಗಳು ಬರ್ತಿವೆ. ನಮ್ಮ ಕಡೆಯಿಂದ ಕ್ಲಿಯರೆನ್ಸ್ ಸಿಗಬೇಕಿದೆ. ಬುಧವಾರ ನಾನು ಸಭೆ ಕರೆದಿದ್ದೇನೆ. ಸರ್ಕಾರದ ಹಂತದಲ್ಲಿ ಏನು ಮಾಡಬೇಕೋ, ಅವರಿಗೆ ಏನು ಸೂಚನೆ ಕೊಡಬೇಕೋ ಅಂತ ನೋಡ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಭಾರತದ ಜೊತೆ ಪಂದ್ಯವಾಡಲು 3 ಷರತ್ತು ಮುಂದಿಟ್ಟ ಪಾಕ್!
ಸಿಎಂ ಜತೆಗೂ ಚರ್ಚೆ ಮಾಡಬೇಕಾಗಿದೆ. ನಮ್ಮ ಶಿಫಾರಸನ್ನು ಅವರು ಎಷ್ಟರ ಮಟ್ಟಿಗೆ ಪೂರೈಸಿದ್ದಾರೆ ಅಂತ ನೋಡಿ ತೀರ್ಮಾನ ಮಾಡ್ತೇವೆ. ಬೆಂಗಳೂರಿನಲ್ಲಿ ಮ್ಯಾಚ್ ಆಗಬೇಕು ಅಂತ ಅಭಿಮಾನಿಗಳು ಬಯಸ್ತಿದ್ದಾರೆ. ಆದರೆ, ಸುರಕ್ಷತೆಯನ್ನೂ ನೋಡಬೇಕು, ಕಾಲ್ತುಳಿತದಂಥ ಘಟನೆಗಳು ಮರುಕಳಿಸಬಾರದಲ್ಲ. ಎಲ್ಲವನ್ನೂ ನೋಡಿ ತೀರ್ಮಾನ ಮಾಡ್ತೇವೆ ಎಂದರು.
ತೇಜಸ್ವಿ ಸೂರ್ಯ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ತೇಜಸ್ವಿ ಸೂರ್ಯ ಒಬ್ಬ ಸಂಸದರು. ಖಾಲಿ ಟ್ರಂಕ್ ಹಿಡಿದು ರಾಜ್ಯ ಸರ್ಕಾರದಲ್ಲಿ ಹಣ ಖಾಲಿ ಆಗಿದೆ ಅನ್ನೋ ಬದಲು ಕೇಂದ್ರದಿಂದ ಅವರು ಹಣ ಕೊಡಿಸಿಕೊಡಲಿ. ಕೇಂದ್ರದಿಂದ ನಮಗೆ ಬಹಳ ಅನುದಾನ ಬರುವುದು ಬಾಕಿ ಇದೆ. ಅದನ್ನು ಅವರು ಮೊದಲು ಕೇಂದ್ರದ ಜತೆ ಮಾತಾಡಿ ಅನುದಾನ ಕೊಡಿಸಲಿ. ಅವರು ಹಣ ಕೊಡಿಸಿದರೆ ಹಣ ರಾಜ್ಯದ ಬಳಿಯೂ ಇರುತ್ತೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: T20 World Cup: ಐರ್ಲೆಂಡ್ ವಿರುದ್ಧ ಶ್ರೀಲಂಕಾಗೆ 20 ರನ್ಗಳ ಗೆಲುವು
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಮ್ಯಾಚ್ ಆಡಿಸುವ ವಿಚಾರವಾಗಿ ಕೆಎಸ್ಸಿಎ ಮತ್ತು ಆರ್ಸಿಬಿ ನಿಯೋಗ ಗೃಹ ಸಚಿವರನ್ನು ಭೇಟಿ ಮಾಡಿದೆ. ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಆರ್ಸಿಬಿಯ ರಾಜೇಶ್ ಮೆನನ್ ನೇತೃತ್ವದ ನಿಯೋಗ ಭೇಟಿಯಾಗಿ ಸಮಾಲೋಚನೆ ನಡೆಸಿದೆ. ಇದೇ ಫೆ.12 ರಂದು ಮತ್ತೊಂದು ಸಭೆ ನಡೆಸಿ ಪಂದ್ಯಾವಳಿ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಬಗ್ಗೆ ಗೃಹ ಸಚಿವರು ಭರವಸೆ ನೀಡಿದ್ದಾರೆ.


