ಬೆಂಗಳೂರು: ಧರ್ಮದ ಅಮಲೇರಿಸಿಕೊಂಡವನಿಂದ ನಡೆದಿತ್ತು ಬಲವಂತದ ಮತಾಂತರ. ಮದುವೆಯಾಗಬೇಕು ಅಂದ್ರೆ ಮುಸ್ಲಿಂ (Muslim) ಧರ್ಮಕ್ಕೆ ಸೇರಬೇಕು ಅಂದಿದ್ದವನಿಗೆ ಬಿತ್ತು ಕೋಳ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಬಳಿಕ ಮೊದಲ ಕೇಸ್ ಬೆಂಗಳೂರಿನಲ್ಲಿ ವರದಿಯಾಗಿದೆ.
ಉತ್ತರ ಪ್ರದೇಶ ಗೋರಕ್ಪುರ ಮೂಲದ ಹಿಂದೂ ಕುಟುಂಬ (Hindu Family) ಕಳೆದ 15 ವರ್ಷಗಳಿಂದ ಬೆಂಗಳೂರಲ್ಲಿ ವಾಸವಿತ್ತು. ಪ್ರೀತಿ (Love) ಹೆಸರಿನಲ್ಲಿ ಆಕೆಯ ತಲೆಕೆಡಿಸಿದವನು ಅವಳ ಧರ್ಮವನ್ನೇ ಬದಲಿಸಿದ್ದ. 19 ವರ್ಷದ ಯುವತಿಯನ್ನ ಮದುವೆ ಆಗುವುದಾಗಿ ನಂಬಿಸಿ ಬಲವಂತವಾಗಿ ಮತಾಂತರ ಮಾಡಿದ್ದ. ಮತಾಂತರ ಮಾಡಿದ 24 ವರ್ಷದ ಸೈಯ್ಯದ್ ಮೊಹಿನ್ ಎಂಬಾತನನ್ನ ಯಶವಂತಪುರ ಪೊಲೀಸರು (Yeshwanthpur Police) ಬಂಧಿಸಿದ್ದಾರೆ. ಆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿಯಾದ ಬಳಿಕ ರಾಜ್ಯದಲ್ಲೇ ಮೊದಲ ಪ್ರಕರಣದಲ್ಲಿ ಆರೋಪಿ ಜೈಲು (Jail) ಪಾಲಾಗಿದ್ದಾನೆ.
ಯುವತಿ ತಂದೆ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ರೆ ತಾಯಿ ಗೃಹಿಣಿ. ಮಗಳು ಅಕ್ಟೋಬರ್ 5ರಂದು ಅಂಗಡಿಗೆ ಹೋಗಿಬರುವುದಾಗಿ ಹೋದವಳು ವಾಪಸ್ ಬಂದಿರಲಿಲ್ಲ. ಪೋಷಕರು ಯಶವಂತಪುರ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಿಸಿದ್ದರು. ಆದರೆ ಒಂದು ವಾರದ ಬಳಿಕ ಸೈಯದ್ ಮೊಹಿನ್ ಜೊತೆ ಬುರ್ಖಾ ಧರಿಸಿ ಯಶವಂತಪುರ ಠಾಣೆಗೆ ಬಂದಿದ್ದಳು. ಮಗಳ ನಡೆ ಕಂಡು ಗಾಬರಿಗೊಂಡ ಪೋಷಕರು ಯಶವಂತಪುರ ಠಾಣೆಗೆ ದೂರು ನೀಡಿದ್ರು. ಇದನ್ನೂ ಓದಿ: ಮೋದಿಯ 100 ವರ್ಷದ ತಾಯಿಯನ್ನು ನಿಂದಿಸಿ ರಾಜಕೀಯ ಮಾಡುತ್ತಿದೆ – ಆಪ್ ವಿರುದ್ಧ ಇರಾನಿ ಕೆಂಡ
ಮನೆ ಬಿಟ್ಟು ಬಂದಿದ್ದವಳನ್ನ ಆಂಧ್ರದ ಪೆನುಗೊಂಡ ಬಳಿಯ ಮಸೀದಿಗೆ ಮೊಹಿನ್ ಕರೆದೊಯ್ದಿದ್ದ. ಅಫಿಡವಿಟ್ ಮಾಡಿಸಿ ಸಹಿ ಪಡೆದು ಆಕೆಯನ್ನ ಕಾನೂನುಬಾಹಿರವಾಗಿ ಮತಾಂತರ ಮಾಡಿದ್ದಾನೆ. ಅಸಲಿಗೆ ಸಂವಿಧಾನದಲ್ಲಿ ಯಾವುದೇ ವ್ಯಕ್ತಿ ಸ್ವ-ಇಚ್ಛೆಯಿಂದ ಮತಾಂತರವಾಗಬಹುದು. ಆದರೆ ಮತಾಂತರವಾಗುವ ವ್ಯಕ್ತಿ ಪ್ರಾದೇಶಿಕ ಡಿಸಿಗೆ ಅರ್ಜಿ ಸಲ್ಲಿಸಬೇಕು. ಬಳಿಕ ಡಿ.ಸಿ ಆ ವ್ಯಕ್ತಿಯ ಪೋಷಕರು/ಆಪ್ತರ ಹೇಳಿಕೆ ಪಡೆಯುತ್ತಾರೆ. ಇದಾದ ಬಳಿಕ 30 ದಿನಗಳ ಗಡುವು ನೀಡುತ್ತಾರೆ. ಯಾವುದೇ ಒತ್ತಡವಿಲ್ಲದೆ ತಮ್ಮ ಇಷ್ಟದಂತೆ ಮತಾಂತರವಾಗುತ್ತಿದ್ದರೆ ಡಿಸಿ ಅನುಮತಿ ನೀಡುತ್ತಾರೆ. ಆದರೆ ಈ ಪ್ರಕರಣದಲ್ಲಿ ಇದ್ಯಾವುದು ಆಗಿಲ್ಲ. ಸದ್ಯ ಆರೋಪಿ ಬಂಧಿಸಿ, ಸಹಕರಿಸಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.