ಚಿಕ್ಕಮಗಳೂರು: ಮೆಸ್ಕಾಂ ಕಚೇರಿ ಒಳಗೆ ಇದ್ದ ಅಂಬೇಡ್ಕರ್ ಭಾವಚಿತ್ರಕ್ಕೆ (Ambedkar Photo) ಕಿಡಿಗೇಡಿಗಳು ಚಪ್ಪಲಿಯಿಂದ ಹೊಡೆದಿರುವ ಘಟನೆ ಜಿಲ್ಲೆಯ ಶೃಂಗೇರಿ ಪಟ್ಟಣದ ಮೆಸ್ಕಾಂ (MESCOM) ಕಚೇರಿಯಲ್ಲಿ ನಡೆದಿದೆ.
ಸರ್ಕಾರಿ ಕಚೇರಿಯಲ್ಲಿ ರಾಷ್ಟ್ರೀಯ ನಾಯಕರ ಭಾವಚಿತ್ರವನ್ನು ಹಾಕಲಾಗಿದೆ. ಅದರಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ್ದಾರೆ. ಅಂಬೇಡ್ಕರ್ ಭಾವಚಿತ್ರದಲ್ಲಿ ಚಪ್ಪಲಿ ಗುರುತು ಕಾಣಿಸಿಕೊಂಡಿದೆ. ಹಾಗಾಗಿ ಫೋಟೋಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ದಲಿತ ಸಂಘಟನೆಯವರು ಅಂಬೇಡ್ಕರ್ ಫೋಟೋವನ್ನು ಸ್ವಚ್ಛಗೊಳಿಸಿ ಹೂವಿನ ಹಾರ ಹಾಕಿದ್ದಾರೆ. ಕಚೇರಿ ಒಳಗೆ ಇದ್ದ ಅಂಬೇಡ್ಕರ್ ಫೋಟೋಗೆ ಅಪಮಾನವಾದರೂ ಅಧಿಕಾರಿಗಳು ದೂರು ನೀಡಲು ಮೀನಾಮೇಷ ಎಣಿಸಿದ್ದರು. ದಲಿತ ಸಂಘಟನೆಗಳು ಸ್ಥಳಕ್ಕೆ ಭೇಟಿ ನೀಡಿ ಆಕ್ರೋಶ ಹೊರಹಾಕಿದ ಬಳಿಕ ಶೃಂಗೇರಿ ಠಾಣೆಯಲ್ಲಿ ದೂರು ದಾಖಲಿಸಿ ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಐವರ ಬಂಧನ
ಕಚೇರಿ ಒಳಗೆ ಇರುವ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ್ದು ಯಾರು ಎಂಬ ಯಕ್ಷ ಪ್ರಶ್ನೆ ಮೂಡಿದೆ. ಯಾಕೆಂದರೆ ಬಯಲು ಪ್ರದೇಶದ ಭಾವಚಿತ್ರವಾದರೆ ದಾರಿಹೋಕರು ಮಾಡಿರಬಹುದು ಎಂದು ಅಂದಾಜಿಸಬಹುದು. ಆದರೆ, ಸರ್ಕಾರಿ ಕಚೇರಿ ಒಳಗಡೆಯೇ ಇದ್ದ ಅಂಬೇಡ್ಕರ್ ಫೋಟೋಗೆ ಈ ರೀತಿ ಮಾಡಿದ್ದಾರೆ ಅಂದರೆ, ಒಳಗಡೆಯೇ ಇರುವವರು ಅಥವಾ ಕಚೇರಿಗೆ ಬಂದು ಹೋಗುವವರೇ ಮಾಡಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಈ ಬಗ್ಗೆ ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಿಖರವಾಗಿ ಹೇಳುವುದು ಕಷ್ಟ, ಆದರೆ ಸೇತುವೆ ರೂಪದ ರಚನೆ ಇದೆ – ರಾಮ ಸೇತು ಬಗ್ಗೆ ಕೇಂದ್ರ ಉತ್ತರ