ಚಿಕ್ಕೋಡಿ: ಆಜಾದಿ ಕಾ ಅಮೃತ ಮಹೋತ್ಸವದ ನಿಮಿತ್ತವಾಗಿ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೋಡ ಮಠದಲ್ಲಿ ಪೀಠಾಧಿಪತಿಗಳಾದ ಶ್ರೀ ಷಡಕ್ಷರಿ ಶಿವಯೋಗಿ ಮುರುಘರಾಜೇಂದ್ರ ಮಹಾಸ್ವಾಮೀಜಿಗಳು ಧ್ವಜಾರೋಹಣ ನೆರವೇರಿಸಿದರು.
ಮುಗಳಖೋಡ ಗ್ರಾಮದಿಂದ ಪಕ್ಕದ ಗ್ರಾಮ ಕೋಳಿಗುಡ್ಡಕ್ಕೆ ಸುಮಾರು 5 ಸಾವಿರ ಬೈಕ್ ರ್ಯಾಲಿ ನಡೆಸಲಾಯಿತು. ಭಾವೈಕ್ಯ ಭಾರತ ಎಂದು ವಿಶೇಷ ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜನೆ ಮಾಡಿದ್ದ ಶ್ರೀಗಳು ಮಾಧ್ಯಮಗಳೊಂದಿಗೆ ಮಾತನಾಡಿ, ಇದು ದೇಶ ಹಾಗೂ ತಾಯ್ನಾಡಿಗೆ ಗೌರವ ಸಮರ್ಪಣೆ ಮಾಡುವ ಕಾರ್ಯಕ್ರಮವಾಗಿದೆ. ಸಾವಿರಾರು ಭಕ್ತರ ಸಮ್ಮುಖದಲ್ಲಿ ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಭಾರತಕ್ಕೆ ಒದಗಿರುವ ಅಮೃತ ಘಳಿಗೆಯಲ್ಲಿ ನಾವು ಬದುಕಿದ್ದೇವೆ. ಇದು ನಮಗೆ ಸಿಕ್ಕಿರುವ ಉತ್ತಮ ಅವಕಾಶ ಎಂದರು. ಇದನ್ನೂ ಓದಿ: ಭೂಮಿಯ ತೇವಾಂಶ ಹೆಚ್ಚಾಯ್ತು – ಮಲೆನಾಡಲ್ಲಿ ಮಳೆ ಕಡಿಮೆಯಾದ್ರೂ ಅನಾಹುತ ಕಡಿಮೆಯಾಗ್ತಿಲ್ಲ
ಇದೇ ವೇಳೆ ಕುಡಚಿ ಶಾಸಕ ಪಿ. ರಾಜೀವ್ ಮಾತನಾಡಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 50ನೇ ವರ್ಷದ ಸಂಭ್ರಮ ಆಚರಣೆ ಮಾಡಿರಲಿಲ್ಲ. ಧ್ವಜ ಸಂಹಿತೆಯ ಹೆಸರಿನಲ್ಲಿ ದೇಶದಲ್ಲಿ ಕೆಲವೇ ಜನ ಹಾಗೂ ಕೆಲ ಕಟ್ಟಡಗಳ ಮೇಲೆ ಮಾತ್ರ ಹಾರಿಸುವ ಅವಕಾಶ ನೀಡಲಾಗಿತ್ತು. ಈ ದೇಶದ ಭಾರತೀಯನಿಗೆ ಧ್ವಜ ಹಿಡಿಯುವ ಸ್ವಾತಂತ್ರ್ಯವನ್ನು ಸಹ ಕೊಟ್ಟಿರಲಿಲ್ಲ. ನರೇಂದ್ರ ಮೋದಿಯವರು ಧ್ವಜ ಹಿಡಿಯಬೇಕು ಹಾಗೂ ಧ್ವಜ ಹಾರಿಸಬೇಕು ಎಂದು ಕರೆ ನೀಡಿ ಧ್ವಜ ಸಂಹಿತೆಯನ್ನೂ ಸಹ ಬದಲಿಸಿದ್ದಾರೆ.
ಇಂದು ಶ್ರೀಮಠದ ಕಲಶದ ಮೇಲೂ ಸಹ ತಿರಂಗಾ ಹಾರಾಡುತ್ತಿದೆ. ಇದಕ್ಕಿಂತ ಇನ್ನೇನು ಹೆಮ್ಮೆ ಬೇಕು ಎಂದರು. ಇದೇ ಸಮಯದಲ್ಲಿ ಶ್ರೀಮಠದ ಅನುಭವ ಮಂಟಪ ಹಾಗೂ ದೇವಸ್ಥಾನದ ಮೇಲೆ ತಿರಂಗಾ ಹಾರಾಡುತ್ತಿದ್ದದ್ದು ಎಲ್ಲರ ಗಮನ ಸೆಳೆಯಿತು. ಇದನ್ನೂ ಓದಿ: ಹರ್ ಘರ್ ತಿರಂಗ – ಭಯೋತ್ಪಾದಕರ ಕುಟುಂಬ ಸದಸ್ಯರಿಂದ ತ್ರಿವರ್ಣ ಧ್ವಜ ಹಾರಾಟ