ಬೆಂಗಳೂರು: ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ರಾಬರ್ಟ್, ಜೆರೋನಾ ಸೀಕ್ವೇರ್ ಸೇರಿದಂತೆ ಐವರು ಕನ್ನಡಿಗರು ಭಾರತ ತಲುಪಿದ್ದಾರೆ. ಇಂದು ಬೆಳಗ್ಗೆ ಕಾಬೂಲ್ ನಿಂದ ಟೇಕಾಫ್ ಆಗಿದ್ದ ಭಾರತೀಯ ವಾಯುಸೇನೆಯ ಗ್ಲೋಬ್ ಮಾಸ್ಟರ್ ಸಿ-17 ವಿಮಾನ ಹಿಂಡನ್ ಏರ್ ಫೋರ್ಸ್ ಬೇಸ್ನ ಗಾಜಿಯಾಬಾದ್ ನಲ್ಲಿ ಲ್ಯಾಂಡ್ ಆಗಿದೆ.
ಕರ್ನಾಟಕ ತಲುಪಿರುವ ಇಬ್ಬರ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಇನ್ನುಳಿದ ಮೂವರ ಹೆಸರನ್ನು ಅಧಿಕಾರಿಗಳು ಖಚಿತಪಡಿಸಿಲ್ಲ. 107 ಭಾರತೀಯರು ಸೇರಿ ಒಟ್ಟು 168 ಜನರನ್ನು ಅಫ್ಘಾನಿಸ್ತಾನದಿಂದ ಭಾರತಕ್ಕೆ ಕರೆ ತರಲಾಗಿದೆ. ಭಾರತೀಯ ಸೇನೆಯ ವಿಮಾನದ ಮೂಲಕ ಕಾಬೂಲ್ನಿಂದ ಹಿಂಡನ್ ಏರ್ ಫೋರ್ಸ್ ಬೇಸ್ನ ಗಾಜಿಯಾಬಾದ್ಗೆ ಕರೆತರಲಾಗಿದೆ. 24 ಗಂಟೆಯಲ್ಲಿ ಮೂರು ವಿಮಾನಗಳ ಮೂಲಕ ಪ್ರಯಾಣಿಕರನ್ನ ಭಾರತಕ್ಕೆ ಕರೆ ತರಲಾಗಿದೆ.
ಕಾಬೂಲ್ ವಿಮಾನ ನಿಲ್ದಾಣ ಅಮೆರಿಕ ನಾಟೋ ರಾಷ್ಟ್ರಗಳ ನಿಯಂತ್ರಣದಲ್ಲಿದೆ. ಸದ್ಯ ಪ್ರತಿನಿತ್ಯ ಭಾರತದ ಎರಡು ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಲಾಗಿದ್ದು, ಮತ್ತಷ್ಟು ಭಾರತೀಯರು ಹಿಂದಿರುಗೋದು ಖಚಿತವಾಗಿದೆ. ಇದನ್ನೂ ಓದಿ: 107 ಭಾರತೀಯರು ಸೇರಿ ಅಫ್ಘಾನಿಸ್ತಾನದಿಂದ 168 ಜನರ ಆಗಮನ
ಅಫ್ಘನ್ನಲ್ಲಿ ಸಿಲುಕಿರುವ ಉಳಿದ ಹಿಂದೂಗಳನ್ನು, ಸಿಖ್ಖರನ್ನು, ಮುಸ್ಲಿಮರನ್ನು, ಕ್ರೈಸ್ತರನ್ನು ಕಾಪಾಡಲು ಕಸರತ್ತುಗಳನ್ನು ನಡೆಸಲಾಗ್ತಿದೆ. ಆದ್ರೆ ತಾಲಿಬಾನ್ ಉಗ್ರರು ಅಷ್ಟು ಸುಲಭಕ್ಕೆ ಭಾರತೀಯರನ್ನು ಏರ್ಪೋರ್ಟ್ ತಲುಪಲು ಬಿಡ್ತಿಲ್ಲ. ಅಲ್ಲಿ ಸಿಲುಕಿರುವ ಭಾರತೀಯರೊಬ್ಬರ ಪ್ರಕಾರ, ಅವರನ್ನು ವಿಮಾನನಿಲ್ದಾಣಕ್ಕೆ ಕರೆದೊಯ್ಯಲು ಕಳೆದ ಎರಡು ದಿನಗಳಿಂದ ನಿರಂತರ ಪ್ರಯತ್ನಗಳು ನಡೆಯತ್ತಿವೆ. ದಾರಿ ಮಧ್ಯೆ ತಾಲಿಬಾನಿ ಉಗ್ರರು ಬಿಡುತ್ತಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅಮ್ಮನಿಂದ ದೂರವಾದ ಕಂದಮ್ಮನನ್ನ ರಕ್ಷಿಸಿದ ಟರ್ಕಿ ಸೈನಿಕರು