ಇಸ್ಲಾಮಾಬಾದ್: ‘ಆಪರೇಷನ್ ಸಿಂಧೂರ’ (Operation Sindoor) ಹೆಸರಿನಲ್ಲಿ ಮಂಗಳವಾರ ತಡರಾತ್ರಿ ಪಾಕ್ ಆಕ್ರಮಿತ ಕಾಶ್ಮೀರ (POK) ಹಾಗೂ ಪಾಕಿಸ್ತಾನದ ಪ್ರಮುಖ ಪ್ರದೇಶಗಳಲ್ಲಿದ್ದ ಉಗ್ರರ 9 ತಾಣಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿ ಪಹಲ್ಗಾಮ್ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಈ ಬೆನ್ನಲ್ಲೇ ಪಿಒಕೆ ರಾಜಧಾನಿ ಮುಜಾಫರಾಬಾದ್ ನಿವಾಸಿಗಳಲ್ಲಿ ಆತಂಕ ಮನೆಮಾಡಿದ್ದು, ಊರು ತೊರೆಯುವ ನಿರ್ಧಾರ ಮಾಡುತ್ತಿದ್ದಾರೆ.
ದೇಶದ ಸೇನಾಪಡೆ, ವಾಯುಪಡೆ ಹಾಗೂ ನೌಕಾಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನ ಊಹೆ ಮಾಡದಂಥ ರೀತಿಯಲ್ಲಿ ತಿರುಗೇಟು ನೀಡಿದೆ. ಬರೋಬ್ಬರಿ 24 ಕ್ಷಿಪಣಿಗಳನ್ನು ಬಳಸಿಕೊಂಡು ಕೇವಲ 25 ನಿಮಿಷಗಳಲ್ಲಿ ದಾಳಿ ನಡೆಸಿ ಉಗ್ರರ ಕ್ಯಾಂಪ್ ಹಾಗೂ 80 ಉಗ್ರರನ್ನು ಭಾರತ ಹೊಡೆದುರುಳಿಸಿದೆ. ಈ ದಾಳಿಯಲ್ಲಿ ಮುಜಾಫರಾಬಾದ್ನಲ್ಲಿದ್ದ ಲಷ್ಕರ್ ಉಗ್ರರ ತರಬೇತಿ ಕೇಂದ್ರವನ್ನೂ ಧ್ವಂಸ ಮಾಡಲಾಗಿದೆ. ಮುಜಾಫರಾಬಾದ್ನ (Muzaffarabad) ಮಸೀದಿಯಲ್ಲಿ ಅಡಗಿದ್ದ ಉಗ್ರರ ಕ್ಯಾಂಪ್ಗಳನ್ನು ಭಾರತ ಉಡಾಯಿಸಿದೆ. ಇದನ್ನೂ ಓದಿ: ಮೇ 11ರಂದು ಲಕ್ನೋದಲ್ಲಿ ಬ್ರಹ್ಮೋಸ್ ಕ್ಷಿಪಣಿ ಉತ್ಪಾದನಾ ಘಟಕ ಉದ್ಘಾಟನೆ – ಪಾಕ್ಗೆ ಶುರುವಾಯ್ತು ನಡುಕ
1971ರ ಪಾಕ್-ಭಾರತ ದಾಳಿ ಬಳಿಕ ಸೇನಾಪಡೆ, ವಾಯುಪಡೆ ಹಾಗೂ ನೌಕಾಪಡೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆ ಇದಾಗಿದೆ. ಘಟನೆ ಬಳಿಕ ಮುಜಾಫರಬಾದ್ ಉಗ್ರರ ಕ್ಯಾಂಪ್ ಬಳಿ ವಾಸವಿದ್ದ ಜನರ ಮನಸಲ್ಲಿ ಭಾರತ ಮತ್ತೆ ದಾಳಿ ಮಾಡುವ ಭೀತಿ ಎದುರಾಗಿದೆ. ಇದರಿಂದಾಗಿ ಜನರು ತಮ್ಮತಮ್ಮ ಮನೆಗಳನ್ನು ಖಾಲಿ ಮಾಡಿ ಗುಳೆ ಹೊರಟಿದ್ದಾರೆ. ಇದನ್ನೂ ಓದಿ: ʼಆಪರೇಷನ್ ಸಿಂಧೂರ್ʼ ಟ್ರೇಡ್ ಮಾರ್ಕ್ಗಾಗಿ ರಿಲಯನ್ಸ್ ಸೇರಿ ಹಲವರಿಂದ ಅರ್ಜಿ