ಬೆಂಗಳೂರು: ದೊಡ್ಮನೆ ಹುಡುಗ ನಟ ಪುನೀತ್ ರಾಜ್ಕುಮಾರ್ ನಿಧನದ ನಂತರ ನೇತ್ರದಾನ ಮಾಡಲು ನೂರಾರು ಸಂಖ್ಯೆಯಲ್ಲಿ ಜನ ಮುಂದಾಗಿದ್ದಾರೆ.
ಪುನೀತ್ ರಾಜ್ಕುಮಾರ್ ಅವರು, ವಿಧಿವಶರಾದ ಬಳಿಕ ನೇತ್ರದಾನ ಮಾಡಿ ನಾಲ್ವರ ಬಾಳಿಗೆ ಬೆಳಕಾಗಿದ್ದಾರೆ. ಇದೀಗ ಪ್ರತಿದಿನ ನಾರಾಯಣ ನೇತ್ರಾಲಯದಲ್ಲಿ ನೇತ್ರದಾನ ಮಾಡಲು ಜನರ ದಂಡು ಹರಿದು ಬರುತ್ತಿದ್ದು, ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ನೇತ್ರದಾನ ಮಾಡಲು ಜನ ನೊಂದಾಯಿಸಿದ್ದಾರೆ ಎಂದು ಡಾ. ಭುಜಂಗ ಶೆಟ್ಟಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ನಾಲ್ವರ ಬಾಳಿಗೆ ಬೆಳಕಾದ ಅಪ್ಪು
ಈ ಕುರಿತಂತೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಪುನೀತ್ ಸಮಾಧಿಗೆ ಭೇಟಿ ಕೊಟ್ಟು ಬಂದವರೆಲ್ಲ ಬಹುತೇಕರು ನೇರವಾಗಿ ನಾರಾಯಣ ನೇತ್ರಾಲಯಕ್ಕೆ ಬಂದು ಕಣ್ಣಿನ ದಾನ ಮಾಡುತ್ತಿದ್ದಾರೆ. ದಿನಕ್ಕೆ 3 ರಿಂದ 4 ಜನ ನೇತ್ರದಾನ ಮಾಡಿದರೆ ಅದೇ ದೊಡ್ಡದು. ಆದರೀಗ ನಿತ್ಯ 200 ಜನದಂತೆ ನೇತ್ರದಾನ ಮಾಡಲು ಬರುತ್ತಿದ್ದಾರೆ. ಇದು ಅಪ್ಪು ಬಿಟ್ಟು ಹೋದ ಸ್ಫೂರ್ತಿ. ಪುನೀತ್ ಸಾವಿನ ಬಳಿಕ 30 ಜನರ ಕಣ್ಣನ್ನು ನಾವು ಬೇರೆಯವರಿಗೆ ಜೋಡಿಸಿದ್ದೇವೆ. ಸಾವಿನ ಮನೆಯಿಂದಲೂ ಕರೆ ಬರುತ್ತಿದೆ. ಇಷ್ಟರಮಟ್ಟಿಗೆ ಜನ ಜಾಗೃತಿಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪುನೀತ್ ಓದಿಸುತ್ತಿದ್ದ 1,800 ಮಕ್ಕಳ ಜವಾಬ್ದಾರಿ ಹೊತ್ತ ನಟ ವಿಶಾಲ್