ಮಂಡ್ಯ: ನಕಲಿ ದಾಖಲೆಗಳ ಸೃಷ್ಟಿ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಮಂಡ್ಯದ ಹೊಳಲು ರಸ್ತೆಯಲ್ಲಿನ ಸಂತೆಮೈದಾನ ಬಳಿಯ ಡಿಕೆಎಚ್ ಅಸೋಸಿಯೇಟ್ ಹೆಸರಿನಲ್ಲಿ ಸೇವಾ ಕೇಂದ್ರ ನಡೆಸುತ್ತಿದ್ದ ದಂಪತಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಮಂಡ್ಯದ ಕೆರೆಯಂಗಳದ ನಿವಾಸಿಗಳಾದ ಹೀನಾಕೌಸರ್ ಹಾಗೂ ತೌಸಿಫ್ ದಡಕನ್ ದಂಪತಿಯು ನಕಲಿ ದಾಖಲಾತಿ ಸೃಷ್ಟಿಯಲ್ಲಿ ತೊಡಗಿದ್ದರು. ಪ್ರತಿ ನಕಲಿ ದಾಖಲಾತಿ ಸೃಷ್ಟಿ ಮಾಡಿಕೊಡಲು 700 ರಿಂದ 1,000 ರೂ.ವರೆಗೆ ಜನರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಸಲ್ಮಾಭಾನು ಆರೋಪಿಸಿದ್ದರು. ಅಲ್ಲದೆ, ಬೆಂಗಳೂರಿನ ಸ್ವಪ್ನ ಎಂಬವರು ಆ.24ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು. ಅದರಂತೆ ದಂಪತಿ ಮೇಲೆ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಇದನ್ನೂ ಓದಿ: ಮಗಳ ಮೃತ ದೇಹ ನೋಡಲು ಜೈಲಿನಿಂದ ಬಂದ ತಂದೆ-ತಾಯಿ
ಆರೋಪದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಚಂದ್ರಶೇಖರ್ ಶಂ.ಗಾಳಿ ಅವರು ಮಂಗಳವಾರ ಕೇಂದ್ರದ ಮೇಲೆ ದಾಳಿ ನಡೆಸಿ 2 ಲ್ಯಾಪ್ಟಾಪ್ಗಳು, ಹಾರ್ಡ್ ಡಿಸ್ಕ್ ಹಾಗೂ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಜೊತೆಗೆ ಗ್ರಾಮ ಲೆಕ್ಕಾಧಿಕಾರಿ ತೇಜಸ್ ನೀಡಿದ ದೂರಿನ ಮೇರೆಗೆ ಮಂಡ್ಯ ಸೆಂಟ್ರಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದರೊಂದಿಗೆ ಪ್ರಕರಣವು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ತನಿಖಾಧಿಕಾರಿಯಾಗಿ ನೇಮಕಗೊಂಡಿರುವ ಸಿಪಿಐ ಹರೀಶ್ ಅವರು ಆರೋಪಿತ ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಸುದೀಪ್ ಹುಟ್ಟುಹಬ್ಬಕ್ಕೆ ಕೋಣ ಬಲಿಕೊಟ್ಟು ವಿಕೃತಿ ಮೆರದ ಅಭಿಮಾನಿಗಳು