ರಾಮನಗರ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬಡವರ ಪರವಿದ್ದರೆ ಋಣಮುಕ್ತ ಕಾಯ್ದೆಯನ್ನ ಅನುಷ್ಠಾನಕ್ಕೆ ತರಲಿ. ಬಡವರ ಪರವಾಗಿ ಆ ಪುಣ್ಯಾತ್ಮ ಕಾಯ್ದೆಯನ್ನ ಜಾರಿ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಯಾಕಂದರೆ ಹಣವಂತರು, ಬಡ್ಡಿಕೋರರು, ಚುನಾವಣೆಗೆ ಹಣ ನೀಡುವವರೇ ಅವರ ಬಳಿ ಇದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಯವರು ಆರೋಪ ಮಾಡಿದ್ದಾರೆ.
ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದಲ್ಲಿ ಮಾತನಾಡಿದ ಅವರು, ಕೆಆರ್ಎಸ್ನಲ್ಲಿ ಸದ್ಯಕ್ಕೆ 7.5 ಟಿಎಂಸಿ ನೀರಿದ್ದು, ರಾಮನಗರ ಜಿಲ್ಲೆಗೆ ಶಾಶ್ವತ ಏತ ನೀರಾವರಿ ಮೂಲಕ ಕೆರೆ ಜಲಾಶಯಗಳನ್ನು ತುಂಬಿಸುವ ಸಲುವಾಗಿ ಸತ್ತೆಗಾಲದಿಂದ ಇಗ್ಗಲೂರು ಜಲಾಶಯಕ್ಕೆ ನೀರು ಹರಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಾಮಗಾರಿ ನಡೆಯುತ್ತಿದ್ದು, ಅದಕ್ಕೂ ಕೊಕ್ಕೆ ಹಾಕಲು ಈಗಿನ ಸರ್ಕಾರ ಹೊರಟಿದ್ದು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅನರ್ಹ ಶಾಸಕರು ಮತ್ತು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಡವರಿಗಾಗಿ ಲೇವಾದೇವಿಗಾರರಿಂದ ಮುಕ್ತಗೊಳಿಸಲು ಋಣಮುಕ್ತ ಕಾಯ್ದೆ ಜಾರಿಗೊಳಿಸಲಾಗಿದೆ. ಈ ಕಾಯ್ದೆಯ ಅನುಷ್ಠಾನ ಇದೀಗ ಬಿಜೆಪಿ ಸರ್ಕಾರದ ಮೇಲಿದ್ದು, ಬಿಎಸ್ವೈ ಅವರು ಬಡವರ ಪರವಿದ್ದರೆ ಈ ಕಾಯ್ದೆಯನ್ನ ಜಾರಿಗೊಳಿಸಲಿ ಎಂದು ಸವಾಲೆಸೆದರು.
ನನ್ನ ವಿರುದ್ಧ ಆರೋಪ ಮಾಡುವ ಕೆಲವರು ಶಾಂಗ್ರೀಲಾ ಹೋಟೆಲ್ ನಲ್ಲಿ ಬಿಲ್ಡರ್ ಗಳ ಸಭೆ ನಡೆಸುತ್ತಾರೆ. ಆದರೆ ನಾನು ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಕ್ಕೆ ಟೀಕಿಸುತ್ತಾರೆ. ನಾನು ಲೇಔಟ್ ಮಾಡಿ ಹಲವಾರು ಬಡವರ ಕುಟುಂಬಗಳನ್ನು ಬೀದಿ ಪಾಲು ಮಾಡಿ ರಾಜಕೀಯಕ್ಕೆ ಬಂದಿಲ್ಲ. ಬಡ್ಡಿ ವ್ಯಾಪಾರ ಮಾಡಿ ಇಸ್ಪೀಟ್ ಆಡುತ್ತಿದ್ದವರನ್ನು ಬಳಸಿಕೊಂಡು ನನ್ನನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದಾರೆ. ಅದಕ್ಕೆಲ್ಲ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ಬಡವರಿಗಾಗಿ ನಾನು ರಾಜಕೀಯದಲ್ಲಿ ಇದ್ದೇನೆ. ಇಲ್ಲದಿದ್ದರೆ ರಾಜಕೀಯ ನಿವೃತ್ತಿ ಘೋಷಿಸುತ್ತಿದ್ದೆ. ಅಲ್ಲದೆ ನಂಬಿಕೆ ಇಟ್ಟವರೇ ಮೋಸ ಮಾಡಿದರು ಎಂದು ಪರೋಪಕ್ಷವಾಗಿ ಅನರ್ಹ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದರು.