ನವದೆಹಲಿ: ಜಾರಿ ನಿರ್ದೇಶನಾಲಯ (ED) ಗೆ ಕಿರುಕುಳ ಸಂಸ್ಥೆ ಎಂದು ಮರುನಾಮಕರಣ ಮಾಡಬೇಕು ಎಂದು ಸಂಸದ ಡಿ.ಕೆ ಸುರೇಶ್ (D.K Suresh) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ವಿಚಾರಣೆಗೂ ಮುನ್ನ ಮಾತನಾಡಿದ ಅವರು ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣ (National Herald Case) ಕ್ಕೆ ಸಂಬಂಧಿಸಿದಂತೆ, ಯಂಗ್ ಇಂಡಿಯಾಕ್ಕೆ ದೇಣಿಗೆ ನೀಡಿದ ವಿಚಾರದಲ್ಲಿ ಡಿ.ಕೆ ಸುರೇಶ್ ಅವರಿಗೆ ಎರಡನೇ ಬಾರಿಗೆ ಸಮನ್ಸ್ ನೀಡಲಾಗಿತ್ತು. ಸಮನ್ಸ್ ಹಿನ್ನಲೆ ಇಂದು ದೆಹಲಿಯಲ್ಲಿರುವ ಇಡಿ ಕಚೇರಿಗೆ ಹಾಜರಾದರು. ಇದನ್ನೂ ಓದಿ: ಬಿಜೆಪಿಯವರು ನನ್ನನ್ನು ಕ್ರಿಮಿನಲ್ ಮಾಡಿದ್ದಾರೆ: ಡಿಕೆಶಿ
ವಿಚಾರಣೆಗೂ ಮುನ್ನ ಮಾತನಾಡಿದ, ಇಡಿ ಕಿರುಕುಳ ನೀಡುವ ಸಂಸ್ಥೆಯಾಗಿದೆ, ಇಡಿ ಅನ್ನೋ ಹೆಸರು ಬದಲಿಸಿ ಕಿರುಕುಳ ಸಂಸ್ಥೆ ಮಾಡಬೇಕು, ರಾಜಕೀಯ ಕಾರಣಗಳಿಗೆ ಕಿರುಕುಳ ನೀಡುತ್ತಿದ್ದಾರೆ ಅನಿಸುತ್ತಿದೆ. ಕಳೆದ ಬಾರಿ ವಿಚಾರಣೆ ಎದುರಿಸಿದ್ದೆವು, ಆನ್ ಲೈನ್ (Online)ನಲ್ಲಿ ದಾಖಲೆಗಳನ್ನು ಸಲ್ಲಿಸುವುದಾಗಿ ಹೇಳಿದ್ದೆವು. ಆದರೂ ಮತ್ತೆ ವಿಚಾರಣೆಗೆ ಕರೆದಿದ್ದಾರೆ.
ಡಿ.ಕೆ ಶಿವಕುಮಾರ್ (D.K Shivakumar) ಅವರಿಗೂ ಸಮನ್ಸ್ ನೀಡಿದ್ದರು. ಪೂರ್ವ ನಿಗದಿತ ಕಾರ್ಯಕ್ರಮ ಹಿನ್ನಲೆ ವಿಚಾರಣೆಗೆ ಬಂದಿಲ್ಲ. ವಿಚಾರಣೆಗೆ ಬರಲು ಇನ್ನೊಂದು ದಿನಾಂಕ ಕೇಳಿದ್ದಾರೆ. ಬೇರೆ ತನಿಖಾಧಿಕಾರಿಯಿಂದ ಸಮನ್ಸ್ ಬಂದಿದೆ. ತನಿಖಾಧಿಕಾರಿ ಬದಲಾಗಿರುವ ಬಗ್ಗೆ ವಿಚಾರಣೆ ಬಳಿಕ ಮಾಹಿತಿ ಕೊಡುತ್ತೇನೆ ಎಂದರು.