ನವದೆಹಲಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡು ಕ್ಷೇತ್ರಗಳಿಂದ ಸೋಲು ಕಂಡಿದ್ದ ಮಾಜಿ ಸಿಎಂ ಚರಂಜಿತ್ ಸಿಂಗ್ ಚನ್ನಿಗೆ ಈಗ ಇಡಿ ಸಂಕಷ್ಟ ಶುರುವಾಗಿದೆ. ಅಕ್ರಮ ಮರುಳು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ವಿಚಾರಣೆ ನಡೆಸಲಾಗಿದೆ.
2018ರಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದರು. ವಿಚಾರಣೆಗೆ ಬುಲಾವ್ ನೀಡಿದ ಹಿನ್ನೆಲೆ ಇಂದು ಚನ್ನಿ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಇದನ್ನೂ ಓದಿ: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಳ್ಳಲಾಗಿದೆ: ಶಂಕರ್ ಪಾಟೀಲ್
ಚನ್ನಿ ವಿಚಾರಣೆಗೆ ಹಾಜರಾಗುತ್ತಿದ್ದಂತೆ ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೀತ್ ಸಿಂಗ್ ಸಿಧು ಟ್ವೀಟ್ ಮಾಡಿದ್ದು, ನನ್ನ ಹೋರಾಟ ಪಂಜಾಬ್ಗಾಗಿಯೇ ಹೊರತು ಮರಳಿಗಾಗಿ ಅಲ್ಲ. ಭೂ, ಮರಳು ಮತ್ತು ಮದ್ಯದ ಮಾಫಿಯಾವನ್ನು ನಡೆಸುತ್ತಿದ್ದವರು ಖಜಾನೆಯನ್ನು ಲೂಟಿ ಮಾಡುವ ಮೂಲಕ ಸ್ವಾರ್ಥ ಹಿತಾಸಕ್ತಿಗಳನ್ನು ಹಿಡೆರಿಸಿಕೊಂಡರು. ಅದಕ್ಕೆ ಪಂಜಾಬ್ನಲ್ಲಿ ಅವಕಾಶ ನೀಡಿದರು. ಈಗಿನ ಆರ್ಥಿಕ ಸನ್ನಿವೇಶದಲ್ಲಿ ಅದು ಪಂಜಾಬ್ ಅಥವಾ ಮಾಫಿಯಾ ಹೋರಾಟ ಮುಂದುವರಿಯುತ್ತದೆ ಎಂದು ಕುಟುಕಿದರು.
ವಿಧಾನಸಭೆ ಚುನಾವಣೆಗೂ ಮುನ್ನ ಚನ್ನಿ ಸಹೋದರಳಿಯ ಭೂಪಿಂದರ್ ಸಿಂಗ್ ಹನಿ ಅವರನ್ನು ವಿಚಾರಣೆ ನಡೆಸಿ ಬಂಧಿಸಲಾಗಿತ್ತು. ಹನಿಯಿಂದ ಹತ್ತು ಕೋಟಿ ರೂ. ವಶಪಡಿಸಿಕೊಳ್ಳಲಾಗಿತ್ತು. ಚರಂಜಿತ್ ಸಿಂಗ್ ಚನ್ನಿ ಅವರಿಗೆ ಸಂಬಂಧಿಸಿದ್ದು ಎನ್ನಲಾಗುತ್ತಿದೆ. ಈ ಹಿನ್ನೆಲೆ ಈಗ ಚನ್ನಿ ವಿಚಾರಣೆ ಆರಂಭಗೊಂಡಿದ್ದು, ಇಂದು ಹಲವು ಗಂಟೆಗಳ ವಿಚಾರಣೆ ನಡೆದಿದೆ. ಮತ್ತೊಮ್ಮೆ ಸಮನ್ಸ್ ನೀಡುವ ಸಾಧ್ಯತೆಗಳಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: 2 ವರ್ಷಗಳ ನಂತರ ಕೋವಿಡ್ ಮುಕ್ತ ‘ಬಿಹು’ ನಡೆಸಲು ಸಜ್ಜಾದ ಅಸ್ಸಾಂ