ರಾಯಚೂರು: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ತಿಳಿಸಿದರು.
ರಾಯಚೂರಿನಲ್ಲಿ ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಯಚೂರಿನಲ್ಲಿ ಜವಳಿ ಪಾರ್ಕ್ಗೆ ಪ್ರಸ್ತಾವನೆ ಕೊಡುತ್ತಿದ್ದೇವೆ. ಖಂಡಿತವಾಗಿ ಜವಳಿ ಪಾರ್ಕ್ ಸ್ಥಾಪಿಸುವ ಬಗ್ಗೆ ಭರವಸೆ ಕೊಡುತ್ತೇನೆ ಎಂದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ಮಾತನಾಡಿರುವ ಅವರು, ರಾಜ್ಯದಲ್ಲಿ ಯಾರೂ ಆತ್ಮಹತ್ಯೆ ಪ್ರಯತ್ನ ಮಾಡಬಾರದು. ಆತ್ಮಹತ್ಯೆ ಪ್ರಕರಣವನ್ನು ಸಮಗ್ರ ತನಿಖೆ ಮಾಡಬೇಕು ಎನ್ನುವುದು ಎಲ್ಲ ಜನತೆ ಅಭಿಪ್ರಾಯವಾಗಿದೆ. ಸಿಎಂ ಬೊಮ್ಮಾಯಿ ಹಾಗೂ ವರಿಷ್ಠರು ಸರಿಯಾದ ತೀರ್ಮಾನವನ್ನು ತೆಗೆದುಕೊಂಡು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: 2 ವರ್ಷಗಳ ನಂತರ ಕೋವಿಡ್ ಮುಕ್ತ ‘ಬಿಹು’ ನಡೆಸಲು ಸಜ್ಜಾದ ಅಸ್ಸಾಂ
ಏಮ್ಸ್ ಬಗ್ಗೆ ಈ ಭಾಗದ ಜನರ ಮನಸ್ಥಿತಿಯನ್ನು ತಿಳಿಸಿ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡುತ್ತೇನೆ. ಟೆಕ್ಸಟೈಲ್ ಪಾರ್ಕ್ ಬಗ್ಗೆ ಪ್ರಸ್ತಾವನೆ ಬಂದರೆ ಕೇಂದ್ರದ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಇದಕ್ಕೂ ಮುನ್ನ ಡಾ.ಬಿ.ಆರ್.ಅಂಬೇಡ್ಕರ್ 131ನೇ ಜಯಂತಿ ಹಿನ್ನೆಲೆ ನಗರದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಶಾಸಕರಾದ ದದ್ದಲ ಬಸನಗೌಡ, ಡಾ.ಶಿವರಾಜ್ ಪಾಟೀಲ್ ಸೇರಿ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಅಂಬೇಡ್ಕರ್ ವೃತ್ತದಿಂದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದವರೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗಿಯಾಗಿದ್ದವು. ಇದನ್ನೂ ಓದಿ: ಲಡ್ಡು ತಿನ್ನಿಸುವ ಮೂಲಕ ವೈವಾಹಿಕ ವಿವಾದ ಕೊನೆಗೊಳಿಸಿದ 70ರ ಹರೆಯ ದಂಪತಿ