ಚಿರಂಜೀವಿ ಸರ್ಜಾ ಅಗಲಿ ಎರಡು ವರ್ಷಗಳು ಕಳೆದಿರುವ ಈ ಸಂದರ್ಭದಲ್ಲಿ ಎರಡನೇ ವರ್ಷದ ಕಾರ್ಯವನ್ನು ಇಂದು ಅವರ ಕುಟುಂಬ ಚಿರು ಸಮಾಧಿಗೆ ಪೂಜೆ ಸಲ್ಲಿಸುವುದರ ಮೂಲಕ ನೆರವೇರಿಸಿದೆ. ಪೂಜಾ ವಿಧಿವಿಧಾನದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಚಿರು ಸಹೋದರ, ನಟ ಧ್ರುವ ಸರ್ಜಾ, ಸಹೋದರನೊಂದಿಗಿನ ನೆನಪುಗಳನ್ನು ಹಂಚಿಕೊಂಡರು.
ಚಿರು ಅಗಲಿ ಎರಡು ವರ್ಷ ಆದರೂ, ನಾವೆಲ್ಲರೂ ಅವನ ನೆನಪಿನಲ್ಲೇ ಸಾಗುತ್ತಿದ್ದೇವೆ. ಯಾರಾದರು ಎದುರಿಗೆ ಸಿಕ್ಕಾಗ ಚೆನ್ನಾಗಿದ್ದೀರಾ..? ಹೇಗಿದ್ದೀರಾ ಅನ್ನುವ ಮಾತುಗಳನ್ನೇ ಆಡುವುದನ್ನು ನಿಲ್ಲಿಸಿಬಿಟ್ಟಿದ್ದೆ. ಅಷ್ಟರ ಮಟ್ಟಿಗೆ ಅಣ್ಣನ ಸಾವು ನನ್ನನ್ನು ಕಾಡಿತ್ತು. ಈಗ ದಿನದಿಂದ ದಿನಕ್ಕೆ ಅವನ ನೆನಪುಗಳು ಜಾಸ್ತಿ ಆಗುತ್ತಿವೆ. ಯಾಕೆಂದರೆ, ನಾನು ತಂದೆ-ತಾಯಿಗಿಂತ ಅಣ್ಣನ ಜೊತೆಯಲ್ಲಿ ಹೆಚ್ಚು ಸಮಯ ಕಳೆದಿದ್ದೇನೆ. ರಾಯನ್ ನೋಡಿದಾಗ ಅಣ್ಣ ಇದ್ದಿದ್ರೆ ಅವನನ್ನು ಇನ್ನೂ ಹೆಚ್ಚಾಗಿ ಮೆರೆಸ್ತಿದ್ದ ಅನಿಸುತ್ತದೆ” ಎಂದು ಸಹೋದರನ ಜೊತೆಗಿನ ಒಡನಾಟ ಹಂಚಿಕೊಂಡರು. ಇದನ್ನೂ ಓದಿ : Exclusive – ವಾಣಿಜ್ಯ ಮಂಡಳಿಯಲ್ಲಿ ಕೋಟ್ಯಂತರ ದುರುಪಯೋಗ? : ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು?
ಸದ್ಯ ಧ್ರುವ ಸರ್ಜಾ ಅವರು ಸಹೋದರ ಚಿರು ನಟಿಸಿರುವ ಕೊನೆಯ ಸಿನಿಮಾ ರಾಜ ಮಾರ್ತಾಂಡ ಸಿನಿಮಾದ ಡಬ್ಬಿಂಗ್ ಕೆಲಸದಲ್ಲಿ ತೊಡಗಿಕೊಂಡಿದ್ದಾರಂತೆ. ಈ ಕುರಿತು ಅವರು ಮಾತನಾಡಿ, ‘ಸದ್ಯ ನಾನು ರಾಜಮಾರ್ತಾಂಡ ಸಿನಿಮಾಗೆ ಡಬ್ಬಿಂಗ್ ಮಾಡ್ತಿದ್ದೀನಿ. ಅವನು ಹೇಳಿದ ಆ ಡೈಲಾಗ್ಗಳನ್ನು ಹೇಳ್ಬೇಕಾದ್ರೆ ಬಹಳ ಕಷ್ಟವಾಗುತ್ತದೆ. ಈಗ ಆ ವಿಡಿಯೋ ನೋಡಿದ್ರು ಬಹಳ ದುಃಖ ಆಗುತ್ತದೆ. ಚಿರುನ ವರ್ಣನೆ ಮಾಡೋಕ್ಕೆ ಕಷ್ಟ ಆಗುತ್ತಿದೆ’ ಎಂದು ಭಾವುಕರಾಗಿ ಮಾತನಾಡಿದರು.