ದಾವಣಗೆರೆ: ರಾಜ್ಯ ಸರ್ಕಾರ ತುರ್ತು ಚಿಕಿತ್ಸಾ ಸಹಾಯಕ್ಕಾಗಿ 108 ಅಂಬುಲೆನ್ಸ್ ಸೇವೆ ಪ್ರಾರಂಭಿಸಿದೆ. ಆದರೆ ಆಂಬುಲೆನ್ಸ್ ನಲ್ಲಿ ಪ್ರಥಮ ಚಿಕಿತ್ಸೆಗೆ ಬೇಕಾದ ಸೂಕ್ತ ಸೌಲಭ್ಯವಿಲ್ಲದೆ ನವಜಾತ ಶಿಶುವೊಂದನ್ನು ಬಲಿ ಪಡೆದುಕೊಂಡಿದೆ.
ಹೌದು… ಅಂಬುಲೆನ್ಸ್ ನಲ್ಲಿ ಆಕ್ಸಿಜನ್ ಇಲ್ಲದ ಕಾರಣ ಉಸಿರಾಟದ ಕೊರತೆಯಾಗಿ ನವಜಾತ ಶಿಶುವೊಂದು ಮೃತಪಟ್ಟಿರುವ ಘಟನೆ ಚೆನ್ನಗಿರಿ ತಾಲ್ಲೂಕಿನ ಬಸವಪಟ್ಟಣ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಶೃಂಗಾಯಬಾಬು ತಾಂಡದ ಹಾಲೇಶ್ ನಾಯಕ್ ಹಾಗೂ ಸ್ವಾತಿ ದಂಪತಿಯ ಮೊದಲ ಮಗುವೇ ಮೃತಪಟ್ಟಿರುವುದು. ಇದನ್ನೂ ಓದಿ: ಚಂದ್ರು ಹತ್ಯೆ ಕೇಸ್ಗೆ ಬಿಗ್ ಟ್ವಿಸ್ಟ್- ಘಟನೆಯ ಇಂಚಿಂಚು ಮಾಹಿತಿ ನೀಡಿದ ಸ್ನೇಹಿತ ಸೈಮನ್ ರಾಜ್
ಏನಿದು ಘಟನೆ?
ಶುಕ್ರವಾರ ರಾತ್ರಿ 2 ಗಂಟೆ ವೇಳೆ ಸ್ವಾತಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಬಸವಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು, ಬೆಳಗ್ಗೆ 7 ಗಂಟೆ ವೇಳೆಗೆ ಹೆರಿಗೆ ಮಾಡಿಸಲಾಗಿದೆ. ಮಗುವಿಗೆ ಉಸಿರಾಟ ತೊಂದರೆಯಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಹೊನ್ನಾಳಿಗೆ ಕರೆದೊಯ್ಯಲು ಪೋಷಕರು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ಕರೆದೊಯ್ಯಬೇಕಿದ್ದ ಆಂಬ್ಯುಲೆನ್ಸ್ನಲ್ಲಿ ಆಕ್ಸಿಜನ್ ಇಲ್ಲದಿದ್ದರೂ ಚಾಲಕ ಮಾರ್ಗಮಧ್ಯೆ ಬೇರೊಂದು ಆಂಬುಲೆನ್ಸ್ ಬರುತ್ತದೆ ಎಂದು ಹೇಳಿ ಕರೆದೊಯ್ದಿದ್ದಾನೆ. ಹೊನ್ನಾಳಿಗೆ ತಲುಪುವವರೆಗೂ ಆಕ್ಸಿಜನ್ ಸಿಗದ ಕಾರಣ ಮಗು ಮಾರ್ಗಮಧ್ಯೆಯೇ ಮೃತಪಟ್ಟಿದೆ. ಇದನ್ನೂ ಓದಿ: ಕೆನಡಾ ತುಂಬಾ ಸೇಫ್ ಎನ್ನುತ್ತಿದ್ದ ಭಾರತದ ವಿದ್ಯಾರ್ಥಿ ಗುಂಡೇಟಿಗೆ ಬಲಿ
ಇದರಿಂದಾಗಿ ಪೋಷಕರು ಹಾಗೂ ಮಗುವಿನ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶಗೊಂಡಿದ್ದು, ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ. ಮೊದಲೇ ಇಲ್ಲಿ ಸರಿಯಾದ ಸಮಯಕ್ಕೆ 108 ಅಂಬುಲೆನ್ಸ್ ಬರುತ್ತಿಲ್ಲ. ಇದ್ದ ಅಂಬುಲೆನ್ಸ್ ನಲ್ಲಿ ಸರಿಯಾದ ಚಿಕಿತ್ಸಾ ವ್ಯವಸ್ಥೆಯಿಲ್ಲ ಎಂದು ದೂರುತ್ತಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿಗಳು ಬರುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಸದ್ಯ ಸ್ಥಳಕ್ಕೆ ಬಸವಪಟ್ಟಣ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.