ಭೋಪಾಲ್: ಕೇಂದ್ರ ಸರ್ಕಾರ ರದ್ದು ಮಾಡಿರುವ ಆರ್ಟಿಕಲ್ 370ಯನ್ನು (Article 370) ಮತ್ತೆ ಬದಲಾಯಿಸುವ ಧೈರ್ಯ ಮಾಡಬೇಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕಾಂಗ್ರೆಸ್ಗೆ (Congress) ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಮಧ್ಯಪ್ರದೇಶದ ಮಂಡ್ಲಾದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸುವ ನಿರ್ಧಾರ, ಬಿಜೆಪಿ ಕಾರ್ಯಕರ್ತರು ಮತ್ತು ಪ್ರಧಾನಿ ನರೇಂದ್ರ ಮೋದಿಯವರದ್ದಾಗಿತ್ತು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಮರಳಲು ಸಾಧ್ಯವಿಲ್ಲ, ಆಕಸ್ಮಿಕವಾಗಿ ಗೆದ್ದರೆ, 370ನೇ ವಿಧಿಯನ್ನು ಬದಲಾಯಿಸಲು ಧೈರ್ಯ ಮಾಡಬೇಡಿ ಎಂದು ನಾನು ಕಾಂಗ್ರೆಸ್ಗೆ ಎಚ್ಚರಿಕೆ ನೀಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ನಮ್ಮ ಬಲಿಷ್ಠ ಸರ್ಕಾರದ ಅವಧಿಯಲ್ಲಿ ಉಗ್ರರು ಅವರ ನೆಲದಲ್ಲೇ ಹತ್ಯೆಯಾಗುತ್ತಿದ್ದಾರೆ: ಮೋದಿ
ಬಿಜೆಪಿ ಸರ್ಕಾರವು ದೇಶದಲ್ಲಿ ಬುಡಕಟ್ಟು ಜನಾಂಗದವರ ಉನ್ನತಿಗೆ ಹಲವಾರು ಯೋಜನೆಗಳನ್ನು ಪರಿಚಯಿಸಿದೆ. ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿಯವರ (Narendra Modi) ಪ್ರಮುಖ ಯೋಜನೆಗಳನ್ನು ವಿಶೇಷವಾಗಿ ಬುಡಕಟ್ಟು ಜನಾಂಗದವರಿಗೆ ಮಾಡಿದ್ದಾರೆ. ಬುಡಕಟ್ಟು ಜನಾಂಗದ ಐಕಾನ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು `ಜನಜಾತಿಯ ಗೌರವ್ ದಿವಸ್’ ಎಂದು ಆಚರಿಸುತ್ತಿರುವುದು ಪ್ರಧಾನಿ ಮೋದಿಯವರ ಆಲೋಚನೆ ಎಂದು ಅವರು ಹೇಳಿದ್ದಾರೆ.
ಮೊದಲ ಜನಜಾತಿಯ ಗೌರವ್ ದಿವಸ್ ಮಧ್ಯಪ್ರದೇಶದಲ್ಲಿ (ನವೆಂಬರ್ 15, 2021 ರಂದು) ಆಚರಿಸಲಾಯಿತು. ಬಿಜೆಪಿಯು ಮಧ್ಯಪ್ರದೇಶದಲ್ಲಿ ಮೊದಲು ಆದಿವಾಸಿಗಳಿಗಾಗಿ ಪಿಇಎಸ್ಎ ಕಾಯಿದೆಯನ್ನು ಜಾರಿಗೆ ತಂದಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ಮೊದಲ ಚುನಾವಣೆ 4 ತಿಂಗಳ ಕಾಲ ನಡೆದಿದ್ದು ನಿಮಗೆ ಗೊತ್ತಾ..?