– ನಾವೇನಿದ್ದರೂ ಅಮೆರಿಕ ಮುಂದೆ ಮಂಡಿ ಊರುತ್ತೇವೆ ಅಂತ ಮೋದಿ ಹೇಳಿಬಿಡಲಿ: ಸಚಿವ
ಬೆಂಗಳೂರು: ಬಾಯ್ಕಾಟ್ ಟರ್ಕಿ, ಅಜರ್ಬೈಜಾನ್ ಎಂದು ಹೇಳುತ್ತಾರೆ. ಪಾಕಿಸ್ತಾನಕ್ಕೆ ಬೆಂಬಲ ಕೊಟ್ಟ ಚೀನಾಗೆ (China) ಬಾಯ್ಕಾಟ್ ಹೇಳುವ ಧೈರ್ಯ ಇದೆಯಾ? ಎಂದು ಪ್ರಿಯಾಂಕ್ ಖರ್ಗೆ (Priyank Kharge) ಟಾಂಗ್ ಕೊಟ್ಟಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಜೊತೆ ಓಪನ್ ಆಗಿ ಟರ್ಕಿ, ಚೀನಾ ಬಂತು. ನಮ್ಮ ಜೊತೆ ಯಾವುದಾದರೂ ದೇಶ ಬಂದಿದ್ಯಾ? ಮೋದಿ ನೂರು ದೇಶಗಳನ್ನು ಪ್ರವಾಸ ಮಾಡಿದ್ದರು. ಎಲ್ಲಾ ಪ್ರಧಾನಿಗಳನ್ನ ಅಪ್ಪಿಕೊಂಡರು. ಒಬ್ಬರಾದರೂ ಸಹಾಯಕ್ಕೆ ಬಂದರಾ? ಹುಚ್ಚರ ಜಾತ್ರೆ ನಡೆದಿದೆ. ಬಾಯ್ಕಾಟ್ ಟರ್ಕಿ, ಅಜರ್ಬೈಜಾನ್ ಎಂದು ಹೇಳುತ್ತಿದ್ದಾರೆ. ಬಾಯ್ಕಾಟ್ ಅಮೆರಿಕಾ, ಬಾಯ್ಕಾಟ್ ಟ್ರಂಪ್ ಮಾಡುತ್ತಾರಾ? ಬಾಯ್ಕಾಟ್ ಚೀನಾ ಎಂದು ಹೇಳುವ ಧೈರ್ಯ ಇದೆಯಾ? ಜೈಶಂಕರ್ ಚೀನಾ ಜೊತೆ ಯುದ್ಧ ಮಾಡೋಕೆ ಆಗುವುದಿಲ್ಲ ಎಂದರು. ಇದು ಅವರ ಸಾಮರ್ಥ್ಯ ಎಂದು ಲೇವಡಿ ಮಾಡಿದರು.ಇದನ್ನೂ ಓದಿ: ಆಪರೇಷನ್ ಸಿಂಧೂರ ಬಳಿಕ ಭಾರತೀಯ ಸೇನೆಗೆ ಬೂಸ್ಟ್ – ರಕ್ಷಣಾ ಇಲಾಖೆಗೆ 50,000 ಕೋಟಿ ಹೆಚ್ಚುವರಿ ಬಜೆಟ್
ಭಾರತ-ಪಾಕಿಸ್ತಾನ (India-Pakistan) ಕದನ ವಿರಾಮ ವಿಚಾರವಾಗಿ ಮಾತನಾಡಿದ ಅವರು, ಮುಂಚೆಯಿಂದಲೂ ನಮ್ಮ ನಿಲುವು ಸ್ಪಷ್ಟವಾಗಿದೆ. ಎಲ್ಲಾ ವಿಪಕ್ಷಗಳು ಸರ್ಕಾರದ ಬೆಂಬಲಕ್ಕೆ ನಿಂತಿವೆ. ಏನೇ ನಿರ್ಧಾರ ಮಾಡಿದರೂ ನಿಮ್ಮ ಜೊತೆ ಇದ್ದೀವಿ. ದೇಶದ ಹಿತಕ್ಕೋಸ್ಕರ ಏನೇ ನಿರ್ಧಾರ ಮಾಡಿದರೂ ಬೆಂಬಲ ಕೊಡುವುದಾಗಿ ಹೇಳಿದ್ದೇವೆ. ಆದರೆ ನಮ್ಮ ವಿದೇಶಾಂಗ ನೀತಿ ಬಗ್ಗೆ ನಮ್ಮ ಆಕ್ಷೇಪವಿದೆ. ಕದನ ವಿರಾಮ ಇರಬಹುದು, ಬೇರೆ ನೀತಿಗಳು, ನಿರ್ಣಯಗಳನ್ನ ಟ್ರಂಪ್ ಯಾಕೆ ಘೋಷಣೆ ಮಾಡುತ್ತಿದ್ದಾರೆ. ಒಂದು ಸಾರಿ ಅಲ್ಲ. 6 ಸಾರಿ ಮಾತನಾಡಿದ್ದಾರೆ. ನನ್ನಿಂದ ಕದನ ವಿರಾಮ ಆಗಿದೆ ಎಂದು ಹೇಳುತ್ತಿದ್ದಾರೆ. ಭಾರತ-ಪಾಕಿಸ್ತಾನಕ್ಕೆ ವ್ಯಾಪಾರ ಮಾಡಿ, ನಾನು ವ್ಯಾಪಾರ ಕೊಡುತ್ತೇನೆ ಎಂದು ಟ್ರಂಪ್ ಹೇಳುತ್ತಿದ್ದಾರೆ. ಇದು ಬೆದರಿಕೆನಾ? ಆಮಿಷನಾ? ಗೊತ್ತಾಗಬೇಕು ಎಂದು ಆಗ್ರಹಿಸಿದರು.
ಕಾಶ್ಮೀರ ನಮ್ಮ ಆಂತರಿಕ ವಿಚಾರ. ಶಿಮ್ಲಾ ಒಪ್ಪಂದದ ಪ್ರಕಾರವೂ ಇದು ಆಂತರಿಕ ವಿಚಾರ. ಇದು ಅಂತರರಾಷ್ಟ್ರೀಯ ವಿಷಯ ಯಾಕೆ ಆಗುತ್ತಿದೆ. ಟ್ರಂಪ್ ಹೇಳುವಾಗ ನಮ್ಮ ಪ್ರಧಾನಿ ಯಾಕೆ ಸುಮ್ಮನಿದ್ದಾರೆ. ಬೇರೆ ಸಮಯದಲ್ಲಿ ಮಾತಾಡುತ್ತಾರೆ. ಈಗ ಯಾಕೆ ಮಾತಾಡುತ್ತಿಲ್ಲ. ಈ ಬಗ್ಗೆ ಮೋದಿ ಮಾತಾಡಬೇಕು. ಮಾತಾಡಲು ಅಗಿಲ್ಲ ಅಂದರೆ ನಮ್ಮ ವಿದೇಶಾಂಗ ನೀತಿಯನ್ನು ಬೇರೆಯವರಿಗೆ ಔಟ್ ಸೋರ್ಸ್ ಕೊಟ್ಟಿದ್ದೇವೆ ಎಂದು ಹೇಳಲಿ. ಕಾಶ್ಮೀರ ಅಂತಾರಾಷ್ಟ್ರೀಯ ವಿಷಯ ಅಂತ ಹೇಳಿ ಬಿಡಿ. ನಾವೇನಿದ್ದರೂ ಅಮೆರಿಕ ಮುಂದೆ ಮಂಡಿ ಊರುತ್ತೇವೆ ಅಂತ ಹೇಳಿಬಿಡಿ, ಚರ್ಚೆಯೇ ನಿಂತು ಹೋಗುತ್ತದೆ ಎಂದು ಆಗ್ರಹಿಸಿದರು.
ಅಮೆರಿಕ ಹೇಳಿದ ಹಾಗೆ ಕೇಳುವುದು, ತಿರಂಗಾ ಯಾತ್ರೆ ಮಾಡೋದಷ್ಟೇನಾ? ನಮ್ಮ ವಿದೇಶಾಂಗ ನೀತಿಗೆ ಯಾರು ಇನ್ಚಾರ್ಜ್? ನಮ್ಮ ನೀತಿ ಬಗ್ಗೆ ನಮ್ಮ ಪ್ರಧಾನಿಗಳು ಹೇಳಬೇಕು. ಇದನ್ನ ತೀರ್ಮಾನ ಮಾಡೋಕೆ ಟ್ರಂಪ್ ಯಾರು? ಆದರೂ ಪದೇ ಪದೇ ಮಾತಾಡ್ತಿದ್ದಾರೆ. ಮೋದಿ ಯಾಕೆ ಮಾತಾಡ್ತಿಲ್ಲ. ಸರ್ವಪಕ್ಷ ಸಭೆಗೆ ಬರುವುದಿಲ್ಲ. ಸಂಸತ್ ಅಧಿವೇಶನ ಕರೆಯರಿ ಅಂದರೆ ಕರೆಯುವುದಿಲ್ಲ. ಯುದ್ಧ ಆಗುವ ಸಮಯದಲ್ಲಿ ಆರ್ಎಸ್ಎಸ್ ಅವರಿಗೆ ಬ್ರಿಫಿಂಗ್ ಕೊಡ್ತಾರೆ. ಆರ್ಎಸ್ಎಸ್ಗೂ ಇದಕ್ಕೂ ಏನು ಸಂಬಂಧ? ಅವರು ಯಾರು? ಕಿಡಿಕಾರಿದರು.
ವಿಶ್ವಗುರು, ಹಿಂದೂ ಹೃದಯ ಸಾಮ್ರಾಟ್ ಅಂತ ಮೋದಿಗೆ ಹೇಳುವುದೆಲ್ಲ ಇವರೇ ಟೈಟಲ್ ಕೊಟ್ಟುಕೊಂಡಿದ್ದಾರೆ. ಮೋದಿಗೆ ಕೊಡುವ ಟೈಟಲ್ಗಳು ಅವರ ಪದ್ದತಿ. ವೀರ ಸಾವರ್ಕರ್ಗೆ ಹೇಗೆ ವೀರ ಎಂದು ಸಿಕ್ಕಿತು ಅದೇ ರೀತಿ ಇವರಿಗೂ ಕೂಡ. ಸ್ವಯಂ ಘೋಷಿತ ವಿಶ್ವಗುರು, ಸ್ವಯಂ ಘೋಷಿತ ಹಿಂದೂವಿ ಸಾಮ್ರಾಟ್ ಇವರು ಎಂದರು. ನೂರು ಟೈಟಲ್ ಇದೆ. ಇವರೇ ಕೊಟ್ಟುಕೊಂಡಿದ್ದಾರೆ. ಇದನ್ನು ಪ್ರಶ್ನೆ ಮಾಡಿದರೆ ಕಾಂಗ್ರೆಸ್ ಅವರನ್ನು ಆಸ್ಪತ್ರೆಗೆ ಸೇರಿಸಬೇಕು ಎನ್ನುತ್ತಾರೆ. ಅದು ಬಿಟ್ಟು ಬಿಜೆಪಿಯವರಿಗೆ ಇನ್ನೇನು ಗೊತ್ತಿಲ್ಲ ಎಂದರು.
ಇದೇ ವೇಳೆ ಕೊತ್ತನೂರು ಮಂಜುನಾಥ್ ಹೇಳಿಕೆ ವಿಚಾರವಾಗಿ ಮಾತನಾಡಿ, ಪಾಕಿಸ್ತಾನಕ್ಕೆ ಪಾಠ ಕಲಿಸಬೇಕಾದರೆ ಬೇರು ಸಮೇತ ಭಯೋತ್ಪಾದನೆ ಕಿತ್ತು ಹಾಕಬೇಕಿತ್ತು. ಭಯೋತ್ಪಾದನೆ ಕಿತ್ತು ಬಿಸಾಕುವಾಗ ವಿರಾಮ ಯಾಕೆ ಆಯ್ತು ಹೇಳಬೇಕು. ಸೇನೆ ವಿಷಯ ಬಂದಾಯ ಯಾರು ರಾಜಕೀಯ ಮಾಡಬಾರದು. ಏನೇ ಇದ್ದರೂ ಕೂಡ ಕೇಂದ್ರ, ಮೋದಿ ಹೇಳಲಿ. ಮಾಹಿತಿ ಕೇಳುವುದರಲ್ಲಿ ತಪ್ಪೇನಿದೆ? ಆಪರೇಷನ್ ಸಿಂಧೂರ ಆದ ಮೇಲೆಯೂ ಪಾಕ್ಗೆ ಐಎಮ್ಎಫ್ನಿಂದ ಸಾಲ ಸಿಕ್ಕಿದೆ. ಆ ಹಣ ಭಯೋತ್ಪಾದಕರಿಗೆ ಕೊಡುತ್ತಾರೆ. ಐಎಮ್ಎಫ್ ಕೊಡುವ ಸಾಲವನ್ನು ಭಾರತಕ್ಕೆ ತಡೆಹಿಡಿಯಲು ಆಗಲಿಲ್ಲ. ಏನು ಆಗ್ತಿದೆ ಎನ್ನುವ ಬಗ್ಗೆ ಜನರಿಗೆ ತಿಳಿಸಲಿ ಎಂದು ಹೇಳಿದರು.ಇದನ್ನೂ ಓದಿ: ಬೂಟಾಟಿಕೆಗೆ 4 ಫ್ಲೈಟ್ ಕಳಿಸಿದ್ದು ಬಿಟ್ರೆ ಏನೂ ಮಾಡಿಲ್ಲ; `ಆಪರೇಷನ್ ಸಿಂಧೂರ’ ಕುರಿತು ಕಾಂಗ್ರೆಸ್ ಶಾಸಕ ಲೇವಡಿ