ಬೆಂಗಳೂರು: ಕಳೆದ ಎರಡು ವರ್ಷಗಳ ಕಾಲ ರಾಜ್ಯ ರಾಜಕಾರಣದ ಜೋಡೆತ್ತುಗಳು ಎಂದೇ ಹೇಳಲಾಗುತ್ತಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅನಿವಾರ್ಯವಾಗಿ ಗುದ್ದೆತ್ತುಗಳಾಗಬೇಕಾಗಿದೆ.
ಎಷ್ಟೇ ವಿಶ್ವಾಸ, ಎಷ್ಟೇ ಆತ್ಮಿಯತೆ ಇದ್ದರೂ ಇಬ್ಬರು ಪರಸ್ಪರ ಗುದ್ದಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಪರಸ್ಪರ ಗುದ್ದಾಡಿಕೊಂಡರಷ್ಟೇ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ ಎನ್ನುವ ಅನಿವಾರ್ಯತೆ ಇಬ್ಬರಿಗೂ ಎದುರಾಗಿದೆ.
ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಪಟ್ಟಾಭಿಷೇಕವಾಗಿದೆ. ಆದ್ದರಿಂದ ಹಳೆ ಮೈಸೂರು ಭಾಗದ ಒಕ್ಕಲಿಗರ ಕೋಟೆಯಲ್ಲಿ ಹೆಚ್ಚು ಸ್ಥಾನ ಗೆದ್ದರಷ್ಟೇ ಡಿಕೆಶಿ ಸಿಎಂ ಕನಸು ನನಸಾಗಲಿದೆ. ಹೇಳಿಕೇಳಿ ಹಳೆ ಮೈಸೂರು ಭಾಗ ಜೆಡಿಎಸ್ ಭದ್ರಕೋಟೆ. ಆದ್ದರಿಂದ ಡಿ.ಕೆ.ಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿ ಪಕ್ಷವನ್ನ ಅಧಿಕಾರಕ್ಕೆ ತರಬೇಕಾದರೆ ಮೊದಲ ರಾಜಕೀಯ ಎದುರೇಟು ನೀಡಬೇಕಿರುವುದು ಮಾಜಿ ಸಿಎಂ ಕುಮಾರಸ್ವಾಮಿಗೆ.
ಒಕ್ಕಲಿಗ ಸಮುದಾಯ ಜೆಡಿಎಸ್ ಜೊತೆ ದೊಡ್ಡ ಪ್ರಮಾಣದಲ್ಲಿ ಇರುವುದರಿಂದ ಸಹಜವಾಗಿಯೆ ಅಲ್ಲಿನ ವೋಟ್ ಬ್ಯಾಂಕಿಗೆ ಕೈ ಹಾಕಬೇಕಾದರೆ ಡಿಕೆಶಿ ದೇವೇಗೌಡರ ಕುಟುಂಬವನ್ನು ಎದುರು ಹಾಕಿಕೊಳ್ಳಲೇಬೇಕು. ದಶಕಗಳ ದ್ವೇಶ ಮರೆತು ಕಳೆದ ಎರಡು ವರ್ಷದ ಹಿಂದೆ ಕುಮಾರಸ್ವಾಮಿ ಹಾಗೂ ಡಿಕೆಶಿ ಜೋಡೆತ್ತಿನಂತೆ ಹೆಗಲು ಕೊಟ್ಟಿದ್ದರು. ಡಿ.ಕೆ.ಶಿವಕುಮಾರ್ ಯಶಸ್ವಿಯಾಗಬೇಕಾದರೆ ಕುಮಾರಸ್ವಾಮಿ ವಿರುದ್ಧ ಗುದ್ದೆತ್ತಿನಂತೆ ಗುದ್ದಾಡಲೇಬೇಕು. ಈ ಗುದ್ದಾಟ ಈ ಹಿಂದಿನ ದಶಕದ ಜಿದ್ದು ಮತ್ತೆ ಹೆಚ್ ಡಿಕೆ ಹಾಗೂ ಡಿಕೆಶಿ ನಡುವೆ ಮರುಕಳಿಸುತ್ತಾ ಎನ್ನುವುದೇ ಸದ್ಯದ ಕುತೂಹಲ.