ಇದೇ ಮೊದಲ ಬಾರಿಗೆ ತಮಿಳು ಸಿನಿಮಾ ರಂಗಕ್ಕೆ ಹಾರಿರುವ ಪ್ರಶಾಂತ್ ರಾಜ್ ಅಚ್ಚರಿ ಎನ್ನುವಂತೆ ಒಂದೇ ಹಂತದಲ್ಲೇ ತಮ್ಮ ಚೊಚ್ಚಲು ತಮಿಳು ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ನಿರಂತರವಾಗಿ ಒಟ್ಟು 52 ದಿನಗಳ ಕಾಲ ಚಿತ್ರೀಕರಣ ಮಾಡಿರುವುದಾಗಿ ಅವರು ತಿಳಿಸಿದ್ದಾರೆ. ಭಾರೀ ಬಜೆಟ್ ನಲ್ಲೇ ಈ ಸಿನಿಮಾ ನಿರ್ಮಾಣವಾಗಿದ್ದು, ಈವರೆಗೂ ಅವರ ನಿರ್ಮಾಣ ಸಂಸ್ಥೆಯಿಂದ ಇಷ್ಟು ಬಜೆಟ್ ನ ಸಿನಿಮಾ ಬಂದಿಲ್ಲ ಎನ್ನುವುದು ಚಿತ್ರದ ಮತ್ತೊಂದು ಹೆಗ್ಗಳಿಕೆ. ಅಂದಾಜು 16 ಕೋಟಿಗೂ ಅಧಿಕ ವೆಚ್ಚವನ್ನೂ ಈ ಸಿನಿಮಾಗಾಗಿ ಖರ್ಚು ಮಾಡಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರಿನಿಂದ ಶುರುವಾದ ಸಿನಿಮಾ ಚಿತ್ರೀಕರಣ ಚೆನ್ನೈ, ಬ್ಯಾಂಕಾಕ್, ಪಟಾಯ್, ಪುಕಟೆ ಸೇರಿದಂತೆ ಹಲವು ತಾಣಗಳಲ್ಲಿ ಚಿತ್ರೀಕರಣವಾಗಿದೆ. ಕಲರ್ ಫುಲ್ ಮತ್ತು ಯೂಥ್ ಫುಲ್ ಸಿನಿಮಾಗಳ ಮೂಲಕ ಹೆಸರು ಮಾಡಿರುವ ಪ್ರಶಾಂತ್ ರಾಜ್, ಈ ಸಿನಿಮಾದಲ್ಲೂ ಅದನ್ನು ಮುಂದುವರೆಸಿದ್ದಾರಂತೆ. ಲವ್ ಗುರು ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿದ್ದ ಪ್ರಶಾಂತ್ ರಾಜ್ ಇದೇ ಮೊದಲ ಬಾರಿಗೆ ಅವರು ತಮಿಳು ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಇದನ್ನೂ ಓದಿ : ಎಪ್ರಿಲ್ 2ನೇ ವಾರದಲ್ಲಿ ನಟಿ ಕಾವ್ಯ ಶಾ ಮದ್ವೆ : ಮಾಧ್ಯಮ ಲೋಕದ ಹುಡುಗನ ಜತೆ ಸಪ್ತಪದಿ
ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಪ್ರಶಾಂತ್ ರಾಜ್ ಸಿನಿಮಾಗಳೆಂದರೆ ಅಲ್ಲಿ ಸಂಗೀತಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ. ಅಲ್ಲದೇ, ಮೆಲೊಡಿಗೂ ಅವರು ಹೆಚ್ಚು ಒತ್ತು ಕೊಡುತ್ತಾರೆ. ಈವರೆಗೂ ಪ್ರಶಾಂತ್ ರಾಜ್ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರಗಳಲ್ಲಿ ಹಾಡುಗಳು ಸೂಪರ್ ಹಿಟ್ ಆಗಿವೆ. ಹೀಗಾಗಿ ಪ್ರಶಾಂತ್ ರಾಜ್ ಮತ್ತು ಅರ್ಜುನ್ ಜನ್ಯ ಕಾಂಬಿನೇಷನ್ ನ ಹಾಡುಗಳು ಬಗ್ಗೆ ಈಗಿಂದಲೇ ಕುತೂಹಲ ಹೆಚ್ಚಾಗಿದೆ.
ತಮಿಳಿನ ಹೆಸರಾಂತ ನಟ ಸಂತಾನಂ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದು, ತಾನ್ಯ ಹೋಪ್ ಈ ಸಿನಿಮಾದಲ್ಲಿ ನಾಯಕಿ. ಸಾಧು ಕೋಕಿಲಾ ಸೇರಿದಂತೆ ಸಾಕಷ್ಟು ಹೆಸರಾಂತ ತಾರೆಯರು ಈ ಸಿನಿಮಾದಲ್ಲಿ ಪಾತ್ರ ಮಾಡಿದ್ದಾರೆ. ರಾಗಿಣಿ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದು ಮತ್ತೊಂದು ವಿಶೇಷ. ಕಲರ್ ಫುಲ್ ಮತ್ತು ಮ್ಯೂಸಿಕ್ ಈ ಮೂರು ಪ್ರಶಾಂತ್ ರಾಜ್ ಮಂತ್ರಗಳು. ಅವರ ಬಹುತೇಕ ಚಿತ್ರಗಳು ಕಲರ್ ಫುಲ್ ಆಗಿ ಮೂಡಿ ಬಂದಿವೆ. ಹೊಸ ಹೊಸ ಲೊಕೇಶನ್ ಗಳಲ್ಲಿ ಚಿತ್ರಿತವಾಗಿವೆ. ತಮಿಳು ಸಿನಿಮಾದಲ್ಲೂ ಈ ಸೂತ್ರವನ್ನೇ ಅವರು ಪಾಲಿಸಿಕೊಂಡು ಹೋಗುತ್ತಿದ್ದಾರಂತೆ.