– ಹರ್ಷ ಕೊಲೆಯಾದ್ರೆ ದೊಡ್ಡ ವಿಷ್ಯ, ದಿನೇಶ್, ಸಯ್ಯದ್ ಶುಬಾನ್ ಸತ್ರೆ ವಿಷ್ಯವೇ ಅಲ್ಲ
– ಎಲ್ಲ ಧರ್ಮಗಳ ರಾಷ್ಟ್ರ, ಕೇವಲ ಹಿಂದೂ-ಮುಸ್ಲಿಂ- ಕ್ರೈಸ್ತರ ದೇಶವಲ್ಲ
ಬೆಂಗಳೂರು: ನಾಳೆಯಿಂದ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುತ್ತಿದೆ. ಶಾಲೆಗಳಲ್ಲಿ ಯೂನಿಫಾರ್ಮ್ ಕಡ್ಡಾಯ ಮಾಡಿದ್ದಾರೆ. ಕೆಲವು ಶಾಲೆಯಲ್ಲಿ ಹಿಜಬ್ ಯೂನಿಫಾರ್ಮ್ ಇದೆ, ಅದನ್ನ ಹೇಗೆ ಮಾನಿಟರ್ ಮಾಡುತ್ತೀರಾ? ಎಂದು ಆಢಳಿತ ಸರ್ಕಾರಕ್ಕೆ ಮಾಜಿ ಸಚಿವ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಪರೀಕ್ಷೆ ಆಯಾ ಶಾಲೆಯಲ್ಲಿ ನಡೆಯೊಲ್ಲ, ಬೇರೆ ಬೇರೆ ಶಾಲೆಯ ಮಕ್ಕಳು ಒಂದು ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಾರೆ. ಶಾಲೆಗಳಲ್ಲಿ ಯೂನಿಫಾರ್ಮ್ ಕಡ್ಡಾಯ ಮಾಡಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಮಾಡಿಲ್ಲ. ಕೆಲವು ಶಾಲೆಯಲ್ಲಿ ಹಿಜಬ್ ಯೂನಿಫಾರ್ಮ್ ಇದೆ. ಅದನ್ನ ಹೇಗೆ ಮಾನಿಟರ್ ಮಾಡುತ್ತೀರಾ? ಕೆಲವು ಶಾಲೆಯಲ್ಲಿ ಬೇರೆ ಯೂನಿಫಾರ್ಮ್ ಇದೆ. ಕೆಲವು ಶಾಲೆಯಲ್ಲಿ ಯೂನಿಫಾರ್ಮೆ ಸಿಕ್ಕಿಲ್ಲ. ಸರ್ಕಾರ ಮಕ್ಕಳ ಭವಿಷ್ಯದ ಕಡೆ ಹೆಚ್ಚಿನ ಗಮನ ಕೊಡಬೇಕು. ಸರ್ಕಾರ ಮಕ್ಕಳ ಮೇಲೆ ಒತ್ತಡ ಹಾಕಬಾರದು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ದಿಗ್ವಿಜಯ್ ಸಿಂಗ್ ಸಹಿತ 6 ಮಂದಿಗೆ 1 ವರ್ಷ ಜೈಲು ಶಿಕ್ಷೆ
ಸಿದ್ದರಾಮಯ್ಯನವರು ಹೇಳಿದ್ದು, ದುಪ್ಪಟ್ಟನ್ನ ಅನೇಕರು ಅನೇಕ ರೀತಿಯಲ್ಲಿ ಹಾಕೊತಾರೆ, ಹೆಂಗಸರು ಹಾಕೊತಾರೆ, ಸ್ವಾಮಿಜಿಯವರು ಹಾಕೊತಾರೆ ಎಂದು ಹೇಳಿದ್ದಾರೆ. ಅವರು ಯಾರ ವಿರುದ್ಧವೂ ಮಾತನಾಡಿಲ್ಲ, ಯಾರಾದರೂ ಸ್ವಾಮಿಜಿಯವರ ಬಗ್ಗೆ ಮಾತಾಡ್ತಾರಾ? ಬಿಜೆಪಿಯವರಿಗೆ ಇಂತಹ ವಿಚಾರಗಳೆ ಬೇಕು, ಮಕ್ಕಳ ವಿದ್ಯಾಭ್ಯಾಸ, ಬೆಲೆಏರಿಕೆಯ ಬಗ್ಗೆ ಮಾತನಾಡುತ್ತಾರ? ಕಾಶ್ಮೀರ ಫೈಲ್ಸ್, ಹಿಜಬ್, ಇಂತಹ ವಿಚಾರಗಳೇ ಅವರಿಗೆ ಬೇಕಾಗಿರೊದು, ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಸೊದು, ಮಾಧ್ಯಮಗಳಲ್ಲಿ ಹಾಕಿಸೊದೆ ಬಿಜೆಪಿಯ ಕೆಲಸ. ಈ ರೀತಿಯ ಡೈವರ್ಟ್ ಮಾಡೊದೆ ಬಿಜೆಪಿಯ ಕೆಲಸವಾಗಿದೆ ಎಂದು ಕಿಡಿಕಾರಿದ್ದಾರೆ.
ಒಬ್ಬ ಹರ್ಷ ಕೊಲೆಯಾದರೆ ದೊಡ್ಡ ವಿಷಯ ಆದರೆ ದಿನೇಶ್ ಸತ್ತರೆ, ಸಯ್ಯದ್ ಶುಬಾನ್ ಸತ್ತರೆ ಅವರಿಗೆ ವಿಷಯವೇ ಅಲ್ಲ. ಯಾರೇ ತಪ್ಪು ಮಾಡಿದರು ಅವರ ವಿರುದ್ಧ ಕ್ರಮ ಕೈಗೊಳ್ಳಿ ಪಿಎಫ್ಐ, ಭಜರಂಗದಳ, ಸಂಘ ಪರಿವಾರ ಯಾರೇ ಆದರು ಕ್ರಮ ತೆಗೆದುಕೊಳ್ಳಿ ಎಂದು ಸೂಚನೆ ನೀಡಿದ್ದಾರೆ.
ದೇವಸ್ಥಾನಗಳ ಬಳಿ ಅನ್ಯಕೋಮಿನ ವರ್ತಕರಿಗೆ ಅವಕಾಶ ಇಲ್ಲ ಎಂದರೆ ಯಾವ ದಿಕ್ಕಿನ ಕಡೆ ಹೋಗ್ತಿದ್ದೇವೆ? ಉರೂಸ್ ಸಂದರ್ಭದಲ್ಲಿ ಹಿಂದೂ ವರ್ತಕರು ವ್ಯಾಪಾರದಲ್ಲಿ ತೊಡಗ್ತಾರೆ. ಇದು ಎಲ್ಲ ಧರ್ಮಗಳ ರಾಷ್ಟ್ರ, ಕೇವಲ, ಹಿಂದೂ, ಮುಸ್ಲಿಂ, ಕ್ರೈಸ್ತರ ದೇಶವಲ್ಲ. ಎಲ್ಲ ಸಮುದಾಯದ, ಎಲ್ಲ ಧರ್ಮದವರಿಗೂ ಸೇರಿದ ರಾಷ್ಟ್ರ ಇಲ್ಲಿ ಸಾಮರಸ್ಯದಿಂದ ಇರಬೇಕು ಎಂದು ಕರೆ ನೀಡಿದ್ದಾರೆ.