ಧಾರವಾಡ: ಶಾಸಕರ ರಾಜೀನಾಮೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಮೈತ್ರಿ ಸರ್ಕಾರ ಉಳಿಯಬೇಕು ಎಂದರೆ ಮುಖ್ಯಮಂತ್ರಿಗಳು ಅಮೆರಿಕಾದಿಂದ ನೇರವಾಗಿ ಧಾರವಾಡಕ್ಕೆ ಬಂದರೆ ಮೂರು ದಿನಗಳಲ್ಲಿ ಸರ್ಕಾರ ಉಳಿಯುತ್ತೆ ಎಂದು ಸ್ವಾಮೀಜಿಯೊಬ್ಬರು ಭವಿಷ್ಯ ನುಡಿದಿದ್ದಾರೆ.
ಧಾರವಾಡದ ಮೈಲಾರ ಸ್ವಾಮೀಜಿಯವರು ಈ ರೀತಿಯ ಭವಿಷ್ಯವೊಂದನ್ನು ನುಡಿದಿದ್ದಾರೆ. ಜಿಲ್ಲೆಯ ರಾಜೀವಗಾಂಧಿ ನಗರದಲ್ಲಿರುವ ತಮ್ಮ ದೇವಸ್ಥಾನದಲ್ಲಿ ಭವಿಷ್ಯವನ್ನು ಸ್ವಾಮೀಜಿ ಹೇಳಿದ್ದು, ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಕತ್ತಿನ ಮಧ್ಯೆ ತ್ರಿಶೂಲದ ಅಂಚು ಸಿಕ್ಕಿಸಿಕೊಂಡು ನಂತರ ಅದನ್ನು ಕಣ್ಣಿನ ಮೇಲಿಟ್ಟುಕೊಂಡು ಸ್ವಾಮೀಜಿ ಭವಿಷ್ಯ ಹೇಳಿದ್ದಾರೆ. ಮೈತ್ರಿ ಸರ್ಕಾರ ಸಂಕಷ್ಟದಲ್ಲಿರುವ ಸಮಯದಲ್ಲಿ ಅಮೆರಿಕ ಪ್ರವಾಸಕ್ಕೆ ಹೋಗಿರುವ ಮುಖ್ಯಮಂತ್ರಿಗಳು ನೇರವಾಗಿ ಧಾರವಾಡಕ್ಕೆ ಬಂದು ಆದಿಶಕ್ತಿ ಹೊಳೆಮ್ಮನ ದರ್ಶನ ಪಡೆದು ನಂತರ ವಿಧಾನಸೌಧ ಪ್ರವೇಶಿಸಿದರೆ ಮೂರು ದಿನದಲ್ಲಿ ಸರ್ಕಾರ ಉಳಿಯುತ್ತೆ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.