ಚಿಕ್ಕಬಳ್ಳಾಪುರ: ರಾಜ್ಯದ ಹಲವೆಡೆ ಬರ ತಾಂಡವವಾಡುತ್ತಿದೆ. ಬರದ ಎಫೆಕ್ಟ್ ಪವಿತ್ರ ಕ್ಷೇತ್ರ ಧರ್ಮಸ್ಥಳಕ್ಕೂ ತಟ್ಟಿತ್ತು. ಭಕ್ತಾದಿಗಳು ಸ್ವಲ್ಪ ದಿನ ಧರ್ಮಸ್ಥಳ ಪ್ರವಾಸ ಮುಂದೂಡಿ ಎಂದು ವೀರೇಂದ್ರ ಹೆಗ್ಗಡೆಯವರು ಮನವಿ ಮಾಡಿದ್ದರು. ಆದರೆ ಧರ್ಮಸ್ಥಳದ ಧರ್ಮಾಧಿಕಾರಿ ಈಗ ಭಗೀರಥರಾಗಿದ್ದಾರೆ.
ಹೌದು. ಚಿಕ್ಕಬಳ್ಳಾಪುರ ಜಿಲ್ಲೆಯ 300ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇದೆ. ಜಿಲ್ಲೆಯ ಯಾವ ಹಳ್ಳಿಗೆ ಹೋದರೂ ಖಾಲಿ ಕೊಡಗಳ ದರ್ಶನವಾಗುತ್ತದೆ. ಜೀವಜಲಕ್ಕಾಗಿ ಜನ-ಜಾನುವಾರುಗಳ ಪರದಾಡುವಂತಾಗಿದೆ. ಸರ್ಕಾರ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದರೂ ಸಾಕಾಗುತ್ತಿಲ್ಲ. ಇಂತಹ ಹೊತ್ತಲ್ಲಿ ಚಿಕ್ಕಬಳ್ಳಾಪುರಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ದೇವರಂತೆ ಬಂದಿದ್ದಾರೆ.
ಜಿಲ್ಲಾಡಳಿತದ ಜೊತೆ ಕೈ ಜೋಡಿಸಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಜಿಲ್ಲೆಯ 37 ಹಳ್ಳಿಗಳಲ್ಲಿ ಸ್ವಯಂಪ್ರೇರಿತವಾಗಿ ಸಮರ್ಪಕವಾಗಿ ವಾರಕ್ಕೆ 2 ಬಾರಿ ಕುಡಿಯವ ನೀರು ಪೂರೈಸುವ ಕೆಲಸ ಮಾಡುತ್ತಿದೆ. ತೀವ್ರ ಬರಗಾಲದಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರ್ಕಾರದಿಂದ ಕೊರೆಸಿರುವ ಅರ್ಧಕ್ಕಿಂತಲೂ ಹೆಚ್ಚು ಬೋರ್ವೆಲ್ಗಳು ನೀರಿಲ್ಲದೇ ನಿಂತು ಹೋಗಿವೆ.
ಕೆಲವು ಖಾಸಗಿಯವರ ನೀರು ಸಿಕ್ಕಿದ್ರೂ ಬೆಳೆಗಳಿಗೆ ನೀರಿಲ್ಲ ಎಂದು ಅವರ್ಯಾರು ನೀರು ಕೊಡಲ್ಲ. ಅಡುಗೆ ಮಾಡುವುದಕ್ಕೆ, ಜನರ ನಿತ್ಯ ಕರ್ಮಗಳಿಗೆ ಸೇರಿ ಜಾನುವಾರುಗಳಿಗೂ ಗುಟುಕು ನೀರಿಲ್ಲ. ಹನಿ ನೀರಿಲ್ಲದ ಹೊತ್ತಲ್ಲಿ ಆಪತ್ಬಾಂಧವರಂತೆ ಬಂದು ನೀರು ಕೊಟ್ಟು ದಾಹ ನೀಗಿಸ್ತಿರುವ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಕಾರ್ಯ ಎಲ್ಲರೂ ಮೆಚ್ಚುವಂತಾಗಿದೆ.