ನವದೆಹಲಿ: ದೆಹಲಿ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಜಯಗಳಿಸಲಿದೆ ಎಂದು ಎಲ್ಲ ಚುನಾವಣಾ ಸಮೀಕ್ಷೆಗಳು ಅಭಿಪ್ರಾಯಪಟ್ಟಿವೆ. ಈ ಮೂಲಕ ಕೇಜ್ರಿವಾಲ್ ಹ್ಯಾಟ್ರಿಕ್ ಸಾಧನೆ ಮಾಡಲಿದ್ದಾರೆ ಎಂದು ಭವಿಷ್ಯ ನುಡಿದಿವೆ.
ಹೇಗಾದರೂ ಮಾಡಿ 22 ವರ್ಷದ ವನವಾಸ ಮುಗಿಸಿ ರಾಜಧಾನಿಯಲ್ಲಿ ಕಮಲ ಅರಳಿಸಬೇಕೆಂದು ಬಿಜೆಪಿ ನಾಯಕರು ಶತ ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್ ಅಂತೂ ಯುದ್ಧಕ್ಕೆ ಮೊದಲೇ ಶಸ್ತ್ರ ತ್ಯಾಗ ಮಾಡಿದೆ. ದೆಹಲಿ ಮತದಾರರ ಮನಸ್ಸಲ್ಲಿ ಖಚಿತವಾಗಿ ಏನಿದ್ಯೋ ಗೊತ್ತಿಲ್ಲ. ಆದ್ರೆ ಇವತ್ತು ಮೂರು ಪಕ್ಷಗಳ ಭವಿಷ್ಯವಂತೂ ಬರೆದಾಗಿದೆ. ದೆಹಲಿ ಚುನಾವಣಾ ಪೂರ್ವ ನಡೆದಿದ್ದ ಎಲ್ಲಾ ಸಮೀಕ್ಷೆಗಳಲ್ಲಿ ಆಮ್ ಆದ್ಮಿ ಪಕ್ಷವೇ ಗೆಲ್ಲುತ್ತೆ ಎಂದು ಹೇಳಲಾಗಿತ್ತು. ಮತದಾನ ಅಂತ್ಯದ ಬಳಿಕ ಸಂಜೆ ಹೊರಬಿದ್ದ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿಯೂ ಹೆಚ್ಚು ಕಡಿಮೆ ಅದೇ ಫಲಿತಾಂಶ ಹೊರಬಿದ್ದಿದೆ.
ಆಮ್ ಆದ್ಮಿ ಪಕ್ಷವೇ ಮತ್ತೆ ದೆಹಲಿ ಗದ್ದುಗೆ ಏರಲಿದೆ ಎಂದು ಎಕ್ಸಿಟ್ ಪೋಲ್ ಹೇಳುತ್ತಿದೆ. ಇತ್ತೀಚಿಗೆ ಜಾರ್ಖಂಡ್, ಮಹಾರಾಷ್ಟ್ರವನ್ನು ಕಳೆದುಕೊಂಡಿದ್ದ ಬಿಜೆಪಿಗೆ ಈ ಬಾರಿಯೂ ದೆಹಲಿ ಕೈಗೆಟುಕಲ್ಲ ಎನ್ನಲಾಗ್ತಿದೆ. ಒಟ್ಟು 70 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ದೆಹಲಿ ಬಹುಮತದೊಂದಿಗೆ ಜಯಗಳಿಸಲಿದೆ ಎಂದು ಎಲ್ಲ ಸಮೀಕ್ಷೆಗಳು ಅಭಿಪ್ರಾಯಪಟ್ಟಿದೆ.
ಸಮೀಕ್ಷೆಗಳು ಹೇಳೋದು ಏನು?
ಟೈಮ್ಸ್ ನೌ: ಆಪ್- 44 , ಬಿಜೆಪಿ- 26, ಕಾಂಗ್ರೆಸ್- 00, ಇತರೆ – 00
ಜನ್ ಕೀ ಬಾತ್: ಆಪ್- 48-61, ಬಿಜೆಪಿ – 09-21, ಕಾಂಗ್ರೆಸ್- 0-1, ಇತರೆ – 00-00
ನ್ಯೂಸ್ ಎಕ್ಸ್: ಆಪ್- 53-57, ಬಿಜೆಪಿ- 11-17, ಕಾಂಗ್ರೆಸ್ – 00-02, ಇತರೆ – 00-00
ಸಿಸಿರೋ: ಆಪ್ – 54, ಬಿಜೆಪಿ – 15, ಕಾಂಗ್ರೆಸ್ – 01, ಇತರೆ – 00
ನ್ಯೂಸ್ ನೇಷನ್: ಆಪ್- 55, ಬಿಜೆಪಿ- 14, ಕಾಂಗ್ರೆಸ್- 01, ಇತರೆ – 00
ಕಡಿಮೆ ಮತದಾನ:
ಇನ್ನು 2015ರಲ್ಲಿ ಮತದಾನಕ್ಕೆ ಕಂಡುಬಂದಿದ್ದ ಉತ್ಸಾಹ ಈ ಬಾರಿ ಕಂಡುಬರಲಿಲ್ಲ. ಕಳೆದ ಚುನಾವಣೆಗೆ ಹೋಲಿಸಿದ್ರೆ ಈ ಬಾರಿ ಕಡಿಮೆ ಮತದಾನ ಆಗಿದೆ. 2015ರಲ್ಲಿ ಶೇ.65 ರಷ್ಟು ಮತದಾನ ಆಗಿದ್ದರೆ ಈ ಬಾರಿ ಸಂಜೆ ಶೇ.55ರಷ್ಟು ಮತದಾನ ನಡೆದಿದೆ. ಫೆಬ್ರವರಿ 11ಕ್ಕೆ ಫಲಿತಾಂಶ ಹೊರಬೀಳಲಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ಬಿಎಲ್ ಸಂತೋಷ್ ಸೇರಿದಂತೆ ಹಲವು ಗಣ್ಯರು ಮತಚಲಾಯಿಸಿದರು. ಚಿನ್ಹೆ ಧರಿಸಿ ಮತದಾನಕ್ಕೆ ಬಂದಿದ್ದನ್ನು ಪ್ರಶ್ನೆ ಮಾಡಿದ ಆಪ್ ಕಾರ್ಯಕರ್ತನಿಗೆ ಕಾಂಗ್ರೆಸ್ ಅಭ್ಯರ್ಥಿ ಅಲ್ಕಾ ಲಂಬಾ ಕಪಾಳಕ್ಕೆ ಬಾರಿಸಿದ್ದಾರೆ. ಮಧುಮಗನೊಬ್ಬ ಕುಟುಂಬದೊಂದಿಗೆ ಬಂದು ಮತ ಚಲಾಯಿಸಿ ಕುಣಿದುಕುಪ್ಪಳಿಸಿದ್ದಾನೆ. 100ಕ್ಕೂ ಹೆಚ್ಚು ಶತಾಯಷಿಗಳು ಮತ ಚಲಾಯಿಸಿದ್ದಾರೆ.
2015ರ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ 67 ಕ್ಷೇತ್ರಗಳಲ್ಲಿ ಗೆದ್ದು ಸರ್ಕಾರ ರಚಿಸಿತ್ತು. ಬಿಜೆಪಿ ಕೇವಲ 3 ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಆದರೆ ಉಳಿದ ಪಕ್ಷಗಳಾದ ಕಾಂಗ್ರೆಸ್, ಸಮಾಜವಾದಿ ಪಕ್ಷ, ಶಿರೋಮಣಿ ಅಕಾಲಿಕ ದಳ, ಇಂಡಿಯ್ ನ್ಯಾಷನಲ್ ಲೋಕದಳ ಖಾತೆ ತೆರೆಯುವಲ್ಲಿ ವಿಫಲವಾಗಿದ್ದವು.