ನವದೆಹಲಿ: ಉದ್ಯಮಿಯೊಬ್ಬರನ್ನು ಸಂಚಾರ ದಟ್ಟಣೆಯಿಂದ ಕೂಡಿದ ಫೈಓವರ್ ಮೇಲಿಯೇ ಅಡ್ಡಗಟ್ಟಿ ಹಣ ದೋಚಿದ ಘಟನೆ ಪಶ್ಚಿಮ ದೆಹಲಿಯ ನರೈನ್ ಫೈಓವರ್ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
40 ವರ್ಷದ ಕಾಶಿಶ್ ಬನ್ಸಾಲ್ ಹಣ ಕಳೆದುಕೊಂಡ ಉದ್ಯಮಿಯಾಗಿದ್ದಾರೆ. ಇವರು ಗುರುವಾರ ತಮ್ಮ ನಿವಾಸದಿಂದ ಗುರುಗಾವ್ ಗೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಪಶ್ಚಿಮ ದೆಹಲಿಯ ನರೈನ್ ಫೈಓವರ್ ಬಳಿ ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಕೌಶಿಶ್ ರನ್ನು ಅಡ್ಡಗಟ್ಟಿದ್ದಾರೆ. ಅಲ್ಲದೇ ಉದ್ಯಮಿಗೆ ಗನ್ ತೋರಿಸಿ, ಅವರ ಬಳಿಯಿದ್ದ 70 ಲಕ್ಷ ರೂಪಾಯಿಯನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ದಟ್ಟಣೆಯಿರುವ ರಸ್ತೆಯಲ್ಲೇ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ದಾಳಿಮಾಡಿರುವುದನ್ನು ಬೇರೊಂದು ವಾಹನದ ಸವಾರರು ವಿಡಿಯೋ ಮಾಡಿದ್ದು, ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ಸಂಬಂಧ ಪ್ರತಿಕ್ರಿಯಿಸಿದ ದೆಹಲಿ ಪೊಲೀಸರು, ಉದ್ಯಮಿಯನ್ನು ಬಹಳ ದಿನದಿಂದ ಗಮನಿಸಿ ಕೃತ್ಯ ಎಸಗಿರುವುದು ಕಂಡುಬಂದಿದ್ದು, ನಡು ರಸ್ತೆಯಲ್ಲೇ ಗನ್ ತೋರಿಸಿ ಹಣ ದೋಚಿಕೊಂಡು ಹೋಗಿದ್ದಾರೆ. ಆರೋಪಿಗಳ ಸುಳಿವು ಸಿಕ್ಕಿದ್ದು, ವ್ಯಾಪಕ ಶೋಧಕಾರ್ಯ ನಡೆಯುತ್ತಿದೆ. ಇದುವರೆಗೂ ಯಾವುದೇ ಆರೋಪಿಯನ್ನು ಬಂಧಿಸಿಲ್ಲ ಎಂದು ಹೇಳಿದ್ದಾರೆ.
ಸಂಚಾರ ದಟ್ಟಣೆಯಿರುವ ರಸ್ತೆಯಲ್ಲೇ ವ್ಯಕ್ತಿಯನ್ನು ಹಲ್ಲೆ ಮಾಡಿ ಹಣ ದೋಚಿದರೂ, ಅವರ ಸಹಾಯಕ್ಕೆ ಯಾರೊಬ್ಬರೂ ಬಾರದೇ ಇರುವುದು ಶೋಚನಿಯ ಸಂಗತಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews