ಬೆಂಗಳೂರು: ಚಾಮರಾಜನಗರದ ತಲಕಾಡು ಅರಣ್ಯ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳ ಅಂಧಾ ದರ್ಬಾರ್ ನಡೆಸುತ್ತಿದ್ದಾರಾ ಎನ್ನುವ ಪ್ರಶ್ನೆಯೊಂದು ಈಗ ಹುಟ್ಟಿಕೊಂಡಿದೆ.
ತಲಕಾಡಿನ ಕಾವೇರಿ ನಂದಿ ದಂಡೆಯಲ್ಲೇ ಮೃತದೇಹ ಸುಡುವುದಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಈಗ ಹಲವು ಅನುಮಾನ ಎದ್ದಿದೆ. ರಕ್ಷಿತಾರಣ್ಯ ಪ್ರದೇಶದಲ್ಲಿ ಮೃತದೇಹ ಸುಡುವುದಕ್ಕೆ ಅವಕಾಶ ನೀಡಿದ್ದು ಹೇಗೆ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಕಾವೇರಿ ನದಿ ದಂಡೆಯಲ್ಲಿ ಒಂದು ಹೆಣ ಸುಡುವುದಕ್ಕೆ 3 ರಿಂದ 4 ಸಾವಿರ ಪಡೆದು ಅವಕಾಶ ಕೊಟ್ಟಿದ್ದಾರೆ ಎನ್ನುವ ಆರೋಪ ಈಗ ಅರಣ್ಯಾಧಿಕಾರಿಗಳ ಮೇಲೆ ಕೇಳಿ ಬಂದಿದೆ.
ಕಾವೇರಿ ನದಿ ಮಲೀನವಾಗುತ್ತಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ತರಾಟೆ ತೆಗೆದುಕೊಂಡಿತ್ತು. ಹೀಗಿದ್ದಾಗ ನದಿ ಪಕ್ಕದಲ್ಲೇ ಮೃತದೇಹ ಸುಡುವುದಕ್ಕೆ ಅರಣ್ಯಾಧಿಕಾರಿಗಳು ಅವಕಾಶ ನೀಡಿದ್ದು ಹೇಗೆ ಎಂದು ವೈಲ್ಡ್ ಲೈಫ್ ಕ್ರೈಂ ಕಂಟ್ರೋಲ್ ಬ್ಯುರೋದ ಸ್ವಯಂಸೇವಕ ಅರ್ಜುನ್ ಪ್ರಶ್ನೆ ಮಾಡಿದ್ದಾರೆ. ಈಗ ದಂಡೆಯಲ್ಲಿ ನಡೆದ ಅಂತ್ಯ ಸಂಸ್ಕಾರದ ವಿಡಿಯೋ ಸೆರೆ ಹಿಡಿದಿರುವ ಅರ್ಜುನ್ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ.