ಬಳ್ಳಾರಿ: ಪುತ್ರಿಯ ನಿಶ್ಚಿತಾರ್ಥ ವೇದಿಕೆಯಲ್ಲಿಯೇ ಆರೋಗ್ಯ ಸಚಿವ ಶ್ರೀರಾಮುಲು ಡಿಸಿಎಂ ಹುದ್ದೆಗೆ ಏರ್ತಾರಾ ಎಂಬ ಮಾತುಗಳು ಬಿಜೆಪಿ ಅಂಗಳದಲ್ಲಿ ಕೇಳಿ ಬರುತ್ತಿವೆ.
ಶ್ರೀರಾಮುಲು ಅವರ ಮಗಳ ನಿಶ್ಚಿತಾರ್ಥ ನಾಳೆ (ಬುಧವಾರ) ಬೆಂಗಳೂರಿನ ಪ್ರತಿಷ್ಠಿತ ತಾಜ್ ಹೋಟೆಲ್ ನಲ್ಲಿ ನಡೆಯಲಿದೆ. ಹೈದರಾಬಾದ್ ಮೂಲದ ಉದ್ಯಮಿ ಮಗ ಲಲಿತ್ ಜೊತೆ ರಾಮುಲು ಅವರ ಮೊದಲ ಮಗಳಾದ ರಕ್ಷಿತಾ ಅವರ ನಿಶ್ಚಿತಾರ್ಥ ಕಾರ್ಯ ನಡೆಯಲಿದೆ. ಕಳೆದ ಒಂದು ವಾರದಿಂದ ರಾಮುಲು ಅವರು ಮಗಳ ನಿಶ್ಚಿತಾರ್ಥ ಸಮಾರಂಭ ಹಿನ್ನೆಲೆ ಬ್ಯುಸಿ ಆಗಿದ್ದಾರೆ. ನಾಳೆ ನಡೆಯಲಿರುವ ನಿಶ್ಚಿತಾರ್ಥ ಕಾರ್ಯಕ್ಕೆ ರಾಜ್ಯ ಮತ್ತು ರಾಷ್ಟ್ರೀಯ ಬಿಜೆಪಿ ನಾಯಕರು ಬರುವ ನಿರೀಕ್ಷೆ ಇದೆ.
ಹೀಗಾಗಿ ಡಿಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿರುವ ರಾಮುಲು ಅವರಿಗೆ ನಾಳೆ ನಡೆಯುವ ಮಗಳ ನಿಶ್ಚಿತಾರ್ಥ ಕಾರ್ಯದ ಸಮಾರಂಭ ಡಿಸಿಎಂ ಹುದ್ದೆಗೆ ಎರಲು ವೇದಿಕೆ ಆಗಬಹುದು. ಉಪಮುಖ್ಯಮಂತ್ರಿ ಹುದ್ದೆಯ ನಿರೀಕ್ಷೆಯಲ್ಲಿರುವ ಶ್ರೀರಾಮುಲು ಮಗಳ ನಿಶ್ಚಿತಾರ್ಥ ಸಮಾರಂಭಕ್ಕೆ ಈಗಾಗಲೇ ಭರ್ಜರಿ ತಯಾರಿ ನಡೆದಿದ್ದು, ನಿಶ್ಚಿತಾರ್ಥಕ್ಕೆ ಕರೆಯುವ ನೆಪದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ಬಗ್ಗೆ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ನಿಶ್ಚಿತಾರ್ಥ ಸಮಾರಂಭಕ್ಕೆ ಕರೆಯುವ ಉದ್ದೇಶದಿಂದಲೇ ಸೋಮವಾರ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರನ್ನು ಭೇಟಿಯಾಗಿದ್ದರು. ಇದೇ ವೇಳೆ ರಾಜಕೀಯ ಬಗ್ಗೆಯೂ ಒಂದಷ್ಟು ಮಾತುಕತೆಯನ್ನು ಶ್ರೀರಾಮುಲು ನಡೆಸಿದ್ದರು. ನಿಶ್ಚಿತಾರ್ಥ ಸಮಾರಂಭಕ್ಕೆ ರಾಷ್ಟ್ರೀಯ ನಾಯಕರ ಆಗಮನ ಹಿನ್ನೆಲೆಯಲ್ಲಿ ಮಗಳ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಎಸ್.ಟಿ ಸಮುದಾಯದ ಪ್ರಮುಖ ನಾಯಕರು ಭಾಗಿ ರಾಮುಲು ಪರ ಬ್ಯಾಟಿಂಗ್ ಮಾಡೋ ಸಾಧ್ಯತೆ ಹೆಚ್ಚಿದೆ.