ದಾವಣಗೆರೆ: ಮೊಬೈಲ್ ಕಳೆದು ಹೋಗಿದ್ದಕ್ಕೆ ಮನೆಯವರು ಬೈಯುತ್ತಾರೆ ಎಂದು ಹೆದರಿ ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆಯ ಡಿಸಿಎಂ ಟೌನ್ ಶಿಪ್ ಬಳಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ದಾವಣಗೆರೆಯ ನಿಟ್ಟುವಳ್ಳಿಯ ನಿವಾಸಿ 22 ವರ್ಷದ ಸಿದ್ದೇಶ್ ಎಂದು ಗುರುತಿಸಲಾಗಿದೆ. ಪಕ್ಕದ ಮನೆಯವರ ಮೊಬೈಲನ್ನು ಯಾವುದೋ ಕಾರಣಕ್ಕೆ ಪಡೆದುಕೊಂಡಿದ್ದ ಸಿದ್ದೇಶ್ ಆ ಮೊಬೈಲ್ನ್ನು ಕಳೆದುಕೊಂಡಿದಕ್ಕೆ ಈ ರೀತಿ ಮಾಡಿಕೊಂಡಿದ್ದಾನೆ.
ಭಾನುವಾರ ರಾತ್ರಿ ಸಿದ್ದೇಶ್ ಪಕ್ಕದ ಮನೆಯವರ ಮೊಬೈಲ್ ಪಡೆದುಕೊಂಡಿದ್ದನು. ಆದರೆ ರಾತ್ರಿಯೇ ಆ ಮೊಬೈಲ್ ಕಳೆದು ಹೋಗಿದೆ. ಇದು ಪಕ್ಕದ ಮನೆಯವರಿಗೆ ತಿಳಿದು ಮೊಬೈಲ್ ವಾಪಸ್ ತಂದುಕೊಡುವಂತೆ ಬೈದಿದ್ದಾರೆ ಮತ್ತು ಸಿದ್ದೇಶ್ ಅವರ ಮನೆಯವರಿಗೆ ತಿಳಿಸುವುದಾಗಿ ಹೇಳಿದ್ದಾರೆ. ಮನೆಯವರಿಗೆ ವಿಷಯ ತಿಳಿದರೆ ಬೈಯುತ್ತಾರೆ ಎಂಬ ಕಾರಣಕ್ಕೆ ಆತ ಇಂದು ಬೆಳಗ್ಗೆ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಸಂಬಂಧ ಸ್ಥಳಕ್ಕೆ ಕೆಟಿಜೆ ನಗರ ಹಾಗೂ ರೈಲ್ವೆ ಪೋಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.