ದಾವಣಗೆರೆ: ಜೋಕಾಲಿ ಆಡುತ್ತಿರುವಾಗ ಹಗ್ಗ ಕುತ್ತಿಗೆಗೆ ಸಿಕ್ಕಿಹಾಕಿಕೊಂಡು ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ದಾವಣಗೆರೆಯ ಆಜಾದ್ ನಗರದ ಕೊರಚರಹಟ್ಟಿಯಲ್ಲಿ ನಡೆದಿದೆ.
ನಗರದ ಮೂರ್ತಪ್ಪ ಹಾಗೂ ಶಾಂತಮ್ಮ ದಂಪತಿಯ ಮೊದಲನೇ ಮಗಳಾದ 11 ವರ್ಷದ ಸಂಜನಾ ಸಾವನ್ನಪ್ಪಿದ ಬಾಲಕಿ. ಜಗಳೂರಿನ ದೇವಿಕೆರೆ ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಓದುತ್ತಿದ್ದ ಸಂಜನಾ 2 ದಿನಗಳ ಹಿಂದೆ ದೀಪಾವಳಿ ಹಬ್ಬಕ್ಕೆ ಮನೆಗೆ ಬಂದಿದ್ದಳು.
ಮನೆಯಲ್ಲಿ ಕೊನೆಯ ಮಗುವನ್ನು ಮಲಗಿಸಲು ಹಾಕಿದ್ದ ಜೋಕಾಲಿಯಲ್ಲಿ ಸಂಜನಾ ಆಗಾಗ ಆಟವಾಡುತ್ತಿದ್ದಳು. ಆದರೆ ದುರದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಜೋಕಾಲಿಯಲ್ಲಿ ಆಟವಾಡುತ್ತಿದ್ದ ಸಂಜನಾ ಕೊರಳಿಗೆ ಹಗ್ಗ ಸಿಕ್ಕಿಹಾಕಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ.
ಸದ್ಯ ಬಾಲಕಿಯ ಮೃತದೇಹ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇಟ್ಟಿದ್ದು, ಅಜಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.