ಬೆಂಗಳೂರು: ಯಜಮಾನ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿರುವ ದರ್ಶನ್ ಅದರ ನಡುವೆಯೂ ಮೈಸೂರಿನ ಹಳೆಯ ಸ್ನೇಹಿತರೊಂದಿಗೆ ಒಂದಿಷ್ಟು ಕಾಲ ಕಳೆದರು. ಬೆಳೆದು ದೊಡ್ಡವರಾಗುತ್ತಲೇ ಜೊತೆಗಿದ್ದವರನ್ನು ಮರೆತುಬಿಡುವ ಕಾಲಿವಿದೆ. ಆದರೆ ಅಂಥಾ ಕೆಟ್ಟ ಮರೆವು ನಮಗೆ ಬೇಡ ಅಂತಾ ತೀರ್ಮಾನಿಸಿರುವವರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಒಬ್ಬರು.
ಇವತ್ತಿಗೆ ನಾವೆಲ್ಲಾ ಏನೇ ಆಗಿರಬಹುದು ಆದರೆ ಹಳೆಯದನ್ನು ಮರೆಯಬಾರದು. ಕಡೇ ಪಕ್ಷ ವರ್ಷಕ್ಕೊಮ್ಮೆಯಾದರೂ ಜೊತೆ ಸೇರಿ ಹಳೆಯ ನೆನಪುಗಳನ್ನು ಮೆಲುಕು ಹಾಕಬೇಕು. ಒಬ್ಬರಿಗೊಬ್ಬರು ಕಷ್ಟ ಸುಖ ಹಂಚಿಕೊಳ್ಳಬೇಕು. ಭವಿಷ್ಯದ ಪ್ಲಾನುಗಳನ್ನು ಚರ್ಚಿಸಬೇಕು ಅನ್ನೋದು ದರ್ಶನ್ ಅವರ ಅಭಿಪ್ರಾಯ. ಈ ಕಾರಣದಿಂದಲೇ ಸುಮಾರು ವರ್ಷಗಳಿಂದ ಸ್ಕೂಲ್ ಮತ್ತು ಕಾಲೇಜಲ್ಲಿ ಜೊತೆಗೆ ಬೆಳೆದ ಸ್ನೇಹಿತರೊಂದಿಗೆ ಒಂದು ಔತಣಕೂಟವನ್ನು ಏರ್ಪಡಿಸಲಾಗುತ್ತಿದೆ. ದರ್ಶನ್ ಅವರ ಜೊತಗೆ ಸಂಪರ್ಕದಲ್ಲಿರುವ ಎಲ್ಲ ಗೆಳೆಯ-ಗೆಳತಿಯರೂ ಒಂದೆಡೆ ಸೇರುತ್ತಾರೆ.
ಹಾಗೆ ನಿನ್ನೆ ಕೂಡಾ ರೀಯೂನಿಯನ್ ಸಭೆ ಏರ್ಪಾಡಾಗಿತ್ತು. ಅಲ್ಲಿಗೆ ಬಂದ ದರ್ಶನ್ ಗೆಳೆಯರು ಹೂವಿನಿಂದ ಸಿಂಗರಿಸಿದ ಅಂಗಿಯೊಂದನ್ನು ತೊಡಿಸಿದ್ದು ವಿಶೇಷವಾಗಿತ್ತು. ಮಲ್ಲಿಗೆ ಗುಲಾಬಿಗಳಿಂದ ತಯಾರಿಸಿದ್ದ ಆ ಅಂಗಿ ದರ್ಶನ್ ಅವರನ್ನು ಪೂರ್ತಿಯಾಗಿ ಆವರಿಸಿತ್ತು.
ಈ ಸಂದರ್ಭದಲ್ಲಿ ದರ್ಶನ್ ಅವರ ಚಿತ್ರರಂಗದ ಗೆಳೆಯರಾದ ಸೃಜನ್, ಧರ್ಮ ಕೀರ್ತಿ ಮತ್ತು ಯಶಸ್ ಸೂರ್ಯ ಸೇರಿದಂತೆ ಹಲವಾರು ಮಂದಿ ಹಾಜರಿದ್ದರು.