ಆನೇಕಲ್: ಕಾಡುಗೋಡಿ ಬಳಿಯ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿಯ ಕಟ್ಟಡದಲ್ಲಿ ಸಿಲಿಂಡರ್ ಸ್ಫೋಟವಾಗಿದ್ದು, ಸ್ಫೋಟದ ರಭಸಕ್ಕೆ ಕಟ್ಟಡವೇ ಕುಸಿದು ಓರ್ವ ಮೃತಪಟ್ಟ ಘಟನೆ ನಡೆದಿದೆ.
ಘಟನೆಯಲ್ಲಿ ಅಪ್ಸರ್ ಪಾಷಾ(22) ಅವರ ತಲೆಯ ಭಾಗಕ್ಕೆ ಹೆಚ್ಚಿನ ಪ್ರಮಾಣದ ಗಾಯವಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೃತ ಅಪ್ಸರ್ ಪಾಷಾ ಪತ್ನಿ ಸುಲ್ತಾನ, ಅವರ ಮಗು ಜೈನ್ ಗಾಯಗೊಂಡಿದ್ದಾರೆ. ಸದ್ಯ ಇವರುಗಳು ಮೂವರು ಗಾಯಾಳುಗಳು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ.
ಇಂದು ಬೆಳಗ್ಗೆ 10:25 ರ ವೇಳೆಗೆ ಈ ಘಟನೆ ನಡೆದಿದ್ದು, ಬಿಲ್ಡಿಂಗ್ ನಲ್ಲಿ ಅಕ್ರಮವಾಗಿ ಗ್ಯಾಸ್ ಫಿಲ್ ಮಾಡಲಾಗುತ್ತಿತ್ತು ಎಂದು ಶಂಕೆ ವ್ಯಕ್ತವಾಗಿದೆ.
ಘಟನೆ ಸಂದರ್ಭದಲ್ಲಿ ಕಟ್ಟಡದ ಒಳಗೆ ಸುಮಾರು ಏಳೆಂಟು ಮಂದಿ ಇದ್ದರು ಎನ್ನಲಾಗಿದೆ. ಇದರಲ್ಲಿ ಈಗಾಗಲೇ ಮೂವರನ್ನು ರಕ್ಷಿಸಲಾಗಿದೆ. ಕಟ್ಟಡದ ಅವಶೇಷಗಳ ಅಡಿ ಓರ್ವ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಶೋಧ ಮುಂದುವರೆಸಿದ್ದಾರೆ.
ಸಿಲಿಂಡರ್ ಸ್ಫೋಟದಿಂದ ಮನೆಯ ಮುಕ್ಕಾಲು ಭಾಗ ಕುಸಿದಿದೆ. ಅಗ್ನಿಶಾಮಕ ಸಿಬ್ಬಂದಿ ಕಟ್ಟಡದ ಅವಶೇಷಗಳನ್ನ ತೆರವುಗೊಳಿಸುತ್ತಿದ್ದಾರೆ.