ಧಾರವಾಡ: ಸಂಕ್ರಾಂತಿಯ ಸಿಹಿ ಸುದ್ದಿ ಸಿಗಲಿದೆ. ಯಾರೂ ಕೂಡ ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ ಎಂದು ಪೌರಾಡಳಿತ ಸಚಿವ ಸಿ.ಎಸ್ ಶಿವಳ್ಳಿ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈತ್ರಿ ಸರ್ಕಾರಕ್ಕೆ ಏನು ಆಗುವುದಿಲ್ಲ, ನಮ್ಮದು ಬಹುಮತದಿಂದ ಬಂದಿರುವ ಸರ್ಕಾರ. ಸದ್ಯ ಇರುವ ಸರ್ಕಾರ ಕೆಡವಿ ಮತ್ತೊಂದು ಸರ್ಕಾರ ರಚನೆ ಮಾಡುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾದಂತೆ. ಕಾಂಗ್ರೆಸ್ನವರು ಯಾವ ಬಿಜೆಪಿ ಶಾಸಕರಿಗೂ ಆಫರ್ ಕೊಟ್ಟಿಲ್ಲ. ಕಮಲ ನಾಯಕರು ಡಿಕೆಶಿ ಸಂಪರ್ಕದಲ್ಲಿ ಕೆಲ ಬಿಜೆಪಿ ಶಾಸಕರು ಇರುವ ಬಗ್ಗೆ ಹೇಳಿರಬಹುದು ಆದರೆ ಯಾರಿಗೂ ನಾವು ಆಫರ್ ಕೊಟ್ಟಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಹೇಗೆ ಬೇಕೋ ಹಾಗೆ ಸುದ್ದಿ ಹಾಕಿ – ಮಾಧ್ಯಮಗಳ ವಿರುದ್ಧ ಸಿಎಂ ಕೆಂಡಾಮಂಡಲ
ಮೈತ್ರಿ ಸರ್ಕಾರ ಬಂದ ಮೇಲೆ ಬಿಜೆಪಿಯವರು ವಿರೋಧ ಪಕ್ಷದಲ್ಲಿ ಇದ್ದಾರೆ. ಅವರ ತರಹ ವಿರೋಧ ಪಕ್ಷದಲ್ಲಿ ಕುಳಿತು ಕೆಲಸ ಮಾಡುವುದು ಸುಲಭ. ಪ್ರಜಾಪ್ರಭುತ್ವದ ಅನುಸಾರ ಸರ್ಕಾರ ರಚನೆಯಾಗಿದೆ, ರೆಸಾರ್ಟ್ ನಲ್ಲಿ ಇರುವವರು ಮತ್ತೆ ವಾಪಸ್ ಬರಲೇಬೇಕಲ್ಲ, ಎಷ್ಟು ದಿನ ಅಂತಾ ರೆಸಾರ್ಟ್ನಲ್ಲಿಯೇ ಇರುತ್ತಾರೆ? ಹೀಗೆ ರೆಸಾರ್ಟ್ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಎಂದರು. ಇದನ್ನೂ ಓದಿ: ಆಪರೇಷನ್ ಕಮಲ ಮೊದಲ ಹಂತ ಯಶಸ್ವಿ: ಎರಡನೇ ಹಂತದಲ್ಲಿ ಏನಾಗುತ್ತೆ?
ಬಿಜೆಪಿಯವರು ಪ್ರಜಾಪ್ರಭುತ್ವಕ್ಕೆ ತಲೆಬಾಗಿ ನಡೆಯಬೇಕು. ಯಾವ ಶಾಸಕರು ಕೂಡ ಮತದಾರರಿಗೆ ವಂಚನೆ ಮಾಡಿ ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ನಮ್ಮದು ಸಮ್ಮಿಶ್ರ ಸರ್ಕಾರ ಆಗಿರುವುದರಿಂದ ಅಸಮಾಧಾನ ಇರುವುದು ಸಹಜ. ಇಲ್ಲಿ ನಾವು ಬಯಸುವುದು ನಮಗೆ ಸಿಗುವುದಿಲ್ಲ, ಹಾಗಂತ ಯಾರೂ ಕೂಡ ಪಕ್ಷ ಬಿಟ್ಟು ಹೋಗುವುದಿಲ್ಲ. ಈ ಬಗ್ಗೆ ಒಳ್ಳೆಯ ಸಿಹಿ ಸುದ್ದಿ ಸಿಗಲಿದೆ ಕಾದು ನೋಡಿ ಎಂದು ಶಿವಳ್ಳಿ ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv